ಚನ್ನಗಿರಿ: ತುಮ್ಕೋಸ್ ಸಂಸ್ಥೆಗೆ 2022-23ನೇ ಸಾಲಿನಲ್ಲಿ 916.26 ಕೋಟಿ ವ್ಯಾಪಾರ ವಹಿವಾಟು ನಡೆಸಿದ್ದು, 11.38 ಕೋಟಿ ನಿವ್ವಳ ಲಾಭ ಗಳಿಸಿದೆ.ಅಡಿಕೆ ಬೆಳೆಗಾರರ ಹಿತ ಕಾಪಾಡಲು ತುಮ್ಕೋಸ್ ಸಂಸ್ಥೆ ಬದ್ಧವಾಗಿದ್ದು, ಅಡಿಕೆ ಬೆಳೆಯಲ್ಲಿ ಹಿತ ದೃಷ್ಟಿಯಿಂದ ಕಾಳುಮೆಣಸು, ಕೋಕೋ ಪರ್ಯಾಯ ಬೆಳೆ ಬೆಳೆಯಲು ಮುಂದಾಗಬೇಕು ಎಂದು ತುಮ್ಕೋಸ್ ಸಂಸ್ಥೆ ಅಧ್ಯಕ್ಷ ಆರ್.ಎಂ. ರವಿ ತಿಳಿಸಿದರು.
ಚನ್ನಗಿರಿಯಲ್ಲಿ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮ್ಕೋಸ್ 15,058 ಸದಸ್ಯರು ಇರುವ ಬೃಹತ್ ಸಹಕಾರಿ ಸಂಘ. ಪ್ರಸ್ತಕ ಸಾಲಿನಲ್ಲಿ ಹಲವಾರು ತಂತ್ರಜ್ಞಾನವನ್ನು ಬಳಸಿಕೊಂಡು ಮೊಬೈಲ್ ಆಪ್ಲಿಕೇಷನ್ ವ್ಯವಸ್ಥೆ ಜಾರಿಗೊಳಿಸಿದೆ.ಪಟ್ಟಣದಲ್ಲಿ 30 ಸಾವಿರ ಚದುರ ಅಡಿ ವಿಸ್ತೀರ್ಣದ ಸೂಪರ್ ಮಾರ್ಕೆಟ್ ಪ್ರಾರಂಭಿಸಲಾಗಿದೆ. ತರೀಕೆರೆಯಲ್ಲಿ ಅಡಿಕೆ ಖರೀದಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು.
ಅಡಿಕೆ ಕೂಲಿ ಕಾರ್ಮಿಕ ಆಕಸ್ಮಿಕವಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ವಿಮಾ ಕಂಪನಿಯಿಂದ 3 ಲಕ್ಷ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ. ಶಾಶ್ವತ ಅಂಗವೈಫಲ್ಯ, ಕಣ್ಣು, ಕಾಲು ಹಾಗೂ ಕೈ ಕಳೆದುಕೊಂಡಲ್ಲಿ ಶೇ 50ರಷ್ಟು ಪರಿಹಾರ ನೀಡಲಾಗುವುದು. ಸದಸ್ಯರಿಗೆ 259 ಕೋಟಿ ಮುಂಗಡ ಸಾಲ ನೀಡಲಾಗಿದೆ. 52.07 ಕೋಟಿ ಅಡಿಕೆ ದಾಸ್ತಾನು ಮೇಲೆ ಸಾಲ ನೀಡಲಾಗಿದೆ ಎಂದರು.
ಸಂಸ್ಥೆ ನಿರ್ದೇಶಕರಾದ ಎಚ್.ಎಸ್. ಶಿವಕುಮಾರ್, ಟಿ.ವಿ. ರಾಜು ಪಟೇಲ್, ಕೆ.ಜಿ. ಸಂತೋಷ್, ಎಂ.ಸಿ. ದೇವರಾಜ್, ಬಿ.ಸಿ. ಶಿವಕುಮಾರ್, ಜಿ.ಆರ್. ಶಿವಕುಮಾರ್, ಎಚ್. ಸುರೇಶ್, ಎ.ಎಂ. ಚಂದ್ರಶೇಖರಪ್ಪ, ಆರ್. ಕೆಂಚಪ್ಪ, ಎನ್. ಗಂಗಾಧರಪ್ಪ, ಎಂ.ಎಸ್. ರಮೇಶ್ ನಾಯ್ಕ, ಎಂ.ಎಸ್. ದೇವೇಂದ್ರಪ್ಪ, ಆರ್. ಪಾರ್ವತಮ್ಮ, ಜಿ.ಆರ್. ಪ್ರೇಮಾ, ವ್ಯವಸ್ಥಾಪಕ ನಿರ್ದೇಶಕ ಎನ್.ಪಿ. ಮಧು ಮತ್ತಿತರರು ಇದ್ದರು.



