ದಾವಣಗೆರೆ: ತೀವ್ರ ಮಳೆ ಕೊರತೆ ಹಿನ್ನೆಲೆ ಸಾಲಕ್ಕೆ ಹೆದರಿ ರೈತನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸಾಲಬಾಳು ಗ್ರಾಮದಲ್ಲಿ ನಡೆದಿದೆ.
ನ್ಯಾಮತಿ ತಾಲೂಕು ಸಾಲಬಾಳು ಗ್ರಾಮದ ಸತೀಶ ನಾಯ್ಕ(33) ಮರವೊಂದಕ್ಕೆನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ. ಸತೀಶ ನಾಯ್ಕ ಮತ್ತು ಸಹೋದರರ ಹೆಸರಿಗೆ ಜಂಟಿ ಖಾತೆಯಲ್ಲಿದ್ದ 2.10ಎಕರೆ ಜಮೀನಿನಲ್ಲಿ ಅಡಿಕೆ ತೋಟದ ಜೊತೆ ಮೆಕ್ಕೆ ಜೋಳ ಕೃಷಿ ಮಾಡಿಕೊಂಡಿದ್ದರು.ಬೀಜ, ಗೊಬ್ಬರ ಸೇರಿ ಜಮೀನು ಅಭಿವೃದ್ಧಿಗಾಗಿ ಹೊನ್ನಾಳಿ ಪಿಎಲ್ಡಿ ಬ್ಯಾಂಕ್ ನಲ್ಲಿ 1.40 ಲಕ್ಷರು. ಸಾಲ, ಧರ್ಮಸ್ಥಳ ಸಂಘದಲ್ಲಿ 50 ಸಾವಿರ ರು. ಸಾಲ ಹಾಗೂ ಕೈಗಡವಾಗಿ ಸುಮಾರು 5 ಲಕ್ಷರು. ಸಾಲವನ್ನು ಮಾಡಿಕೊಂಡಿದ್ದರು. ಮಳೆ ಕೈಕೊಟ್ಟಿದ್ದರಿಂದ ಸತೀಶ ನಾಯ್ಕ ಆತಂಕಕ್ಕೆ ಒಳಗಾಗಿದ್ದರು.
ಮಳೆಬಾರದ್ದರಿಂದ ಬಿತ್ತಿದ್ದ ಬೆಳೆಯುಸಹಕೈಗೆ ಬರಲಿಲ್ಲ. ಬ್ಯಾಂಕ್, ಸಂಘ ಹಾಗೂ ಕೈಗಡಸಾಲವನ್ನು ಹೇಗೆ ತೀರಿಸುವುದೆಂಬ ಆತಂಕದಲ್ಲಿ ಸತೀಶನಾಯ್ಕ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಮೃತನ ಪತ್ನಿ ರೇಷ್ಮಾ ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.