ದಾವಣಗೆರೆ: ಅತ್ಯಾಚಾರ ಪ್ರಕರಣವೊಂದರ ಆರೋಪಿ ಜೈಲಿನ ಗೋಡೆ ಮೇಲಿಂದ ಹಾರಿ ಪರಾರಿಯಾದ ಘಟನೆ ನಗರದ ಉಪಕಾರಾಗೃಹದಲ್ಲಿ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗೋಡೆ ಮೇಲಿಂದ ಹಾರಿ ಕೆಳಗೆ ಬಿದ್ದು ಕಾಲಿಗೆ ಪೆಟ್ಟಾಗಿದ್ದರೂ ಕುಂಟುತ್ತಲೇ ಓಡಿ ಹೋಗಿ ಆಟೋ ಹತ್ತಿ ಪರಾರಿ ಆಗಿದ್ದಾನೆ. ವಸಂತ್(23) ಪರಾರಿಯಾದ ಆರೋಪಿಯಾಗಿದ್ದಾನೆ.
ದಾವಣಗೆರೆ ನಗರದ ಹೊರವಲಯದ ಕರೂರು ಕೈಗಾರಿಕಾ ಪ್ರದೇಶದ ನಿವಾಸಿಯಾಗಿರುವ ವಸಂತ್ ವೃತ್ತಿಯಿಂದ ಆಟೋ ಚಾಲಕ. ಕಳೆದ ಎರಡು ದಿನಗಳ ಹಿಂದೆ ದಾವಣಗೆರೆ ಮಹಿಳಾ ಠಾಣೆಯಲ್ಲಿ ಈತನ ಮೇಲೆ ದೂರು ದಾಖಲಾಗಿತ್ತು. ದೂರು ದಾಖಲಾದ ಹಿನ್ನೆಲೆ ಮಹಿಳಾ ಠಾಣೆ ಪೊಲೀಸರು ವಸಂತ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಶನಿವಾರ(ಆ.26) ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಉಪ ಕಾರಾಗೃಹದ ಗೋಡೆ ಜಿಗಿದು ಆರೋಪಿ ವಸಂತ್ ಪರಾರಿಯಾಗಿದ್ದಾನೆ. ಗೋಡೆ ಮೇಲಿಂದ ಜಿಗಿದ ಪರಿಣಾಮ ಕಾಲಿಗೆ ಪೆಟ್ಟು ಲೆಕ್ಕಿಸದೆ ಓಡಿ ಹೋಗಿದ್ದಾನೆ. ಆರೋಪಿ ನಾಪತ್ತೆಯಾದ ಕೆಲ ಹೊತ್ತಿನ ಬಳಿಕ ಜೈಲು ಸಿಬ್ಬಂದಿಗೆ ಮಾಹಿತಿ ಸಿಕ್ಕಿದೆ. ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮತ್ತೆ ಆರೋಪಿ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.



