ಡಿವಿಜಿ ಸುದ್ದಿ, ಹರಿಹರ: ಧಾರ್ಮಿಕ, ತಾತ್ವಿಕವಾಗಿ ಮಹಿಳೆಯರಿಗೆ ಎಷ್ಟೇ ಗೌರವ, ಸ್ಥಾನಮಾನ ನೀಡಿದ್ದರೂ, ವ್ಯವಹಾರಿಕವಾಗಿ ಮಹಿಳೆಯರಿಗೆ ಸಿಗಬೇಕಾದ ಸ್ಥಾನಮಾನ ಇನ್ನು ಸಿಕ್ಕಿಲ್ಲ ಎಂದು ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಪ್ರಥಮ ಹರ ಜಾತ್ರಾ ಮಹೋತ್ಸವದ ಮಹಿಳಾ ಸಮಾವೇಶ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಎಲ್ಲಿ ಮಹಿಳೆಯರಿಗೆ ಗೌರವ ನೀಡಲಾಗುತ್ತದೆಯೋ , ಅಲ್ಲಿ ದೇವಾನು ದೇವತೆಗಳು ನೆಲೆಸುತ್ತಾರೆ ಎನ್ನುವ ನಂಬಿಕೆ ಇದೆ. ಆದರೆ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಧಾರ್ಮಿಕ, ತಾತ್ವಿಕವಾಗಿ ಎಷ್ಟೇ ಗೌರವ ಸ್ಥಾನಮಾನ ಕೊಟ್ಟರೂ, ವ್ಯವಹಾರಿಕವಾಗಿ ಇನ್ನು ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲ. ಪುರುಷರು ಮಹಿಳೆಯರ ಮಾತಿಗೆ ಬೆಲೆ ಕೊಡುತ್ತಿಲ್ಲ. ಸಮಾಜದಲ್ಲಿ ಈ ಮಾನೋಭಾವ ಬದಲಾಗಬೇಕು ಕರೆ ನೀಡಿದರು.
ಇನ್ನು ಶುಭ ಸಮಾರಂಭದಲ್ಲಿ ವಿಧವೆ ಮಹಿಳೆಯರನ್ನು ದೂರವಿಡುವುದು ಸರಿಯಲ್ಲ. ನಿಜವಾಗಿ ಅವರಿಂದಲೇ ನವ ವಧು-ವರಿಗೆ ಆರ್ಶೀವಾದ ಮಾಡಿಸಬೇಕು. ಏಕೆಂದರೆ, ತಾವು ಪಟ್ಟಕಷ್ಟವನ್ನು ಇನ್ನೊಬ್ಬರು ಪಡಬಾರದು ಎಂದು ಮನಸಾರೆ ಆರ್ಶೀವಾದ ಮಾಡುತ್ತಾರೆ. ಹೀಗಾಗಿ ವಿಧಿವೆಯರನ್ನು ಕನಿಷ್ಠವಾಗಿ ಕಾಣುವ ಮನೋ ಸ್ಥಿತಿ ಬದಲಾಗಬೇಕು. ಪಂಚಮಸಾಲಿ ಸಮಾಜದ ಪ್ರಥಮ ಹರ ಜಾತ್ರಾ ಮಹೋತ್ಸವದಲ್ಲಿ ಮಹಿಳಾ ಸಮಾವೇಶದಲ್ಲಿ ಭಾಗಿಯಾದ ಎಲ್ಲಾ ಮಹಿಳೆಯರು ಈ ಶಪಥ ಮಾಡಿದರೆ, ಈ ಕಾರ್ಯಕ್ರಮ ಆಯೋಜಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.

ಈ ಜಗತ್ತಿನ ಅತಿ ದೊಡ್ಡ ಶಕ್ತಿ ತಾಯಿ. ಅವಳು ತೋರಿಸುವ ಮಮತೆಯನ್ನು ಯಾರಿಂದಲೂ ಕೊಡಲು ಸಾಧ್ಯವಿಲ್ಲ. ಎಷ್ಟೇ ಆಸ್ತಿ, ಅಧಿಕಾರದಲ್ಲಿದ್ದರೂ, ತಾಯಿ ಪ್ರೀತಿ ಮುಂದೆ ಎಲ್ಲದು ಸಣ್ಣದು. ಹೀಗಾಗಿ ತಾಯಿಯ ಮನಸ್ಸಿಗೆ ನೋವು ಆಗದಂತೆ ನಡೆದುಕೊಳ್ಳಿ ಎಂದು ಸಲಹೆ ನೀಡಿದರು. ಹೆಣ್ಣು, ಹೊನ್ನು, ಮಣ್ಣು ಮಾಯೆ ಎಂಬ ಮಾತು ಬಹಳ ಹಿಂದಿನಿಂದಲೂ ಇದೆ. ಆದರೆ, ಬಸವಾದಿ ಶರಣು ಈ ವಾದ ಒಪ್ಪುವುದಿಲ್ಲ. ಹೆಣ್ಣು, ಹೊನ್ನು, ಮಣ್ಣು ಮಾಯೆಯಲ್ಲ ಮನದ ಆಸೆಯೇ ನಿಜವಾದ ಮಾಯೆ ಎಂದು ಅಲ್ಲಮಪ್ರಭುಗಳು ವಚನದಲ್ಲಿ ಉಲ್ಲೇಖಿಸಿದ್ಧಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನಕ ಗುರುಪೀಠದ ಶ್ರೀ ನಿರಂಜನಾಂದಪುರಿ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಮತ್ತಿತರರು ಭಾಗಿಯಾಗಿಯಾಗಿದ್ದರು.



