ದಾವಣಗೆರೆ: ತುಂಗಾಭದ್ರಾ ನದಿಯಲ್ಲಿ ಕಾಲು ಜಾರಿ ಬಿದ್ದು, ತಾಯಿ-ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ಹರಿಹರ ತಾಲ್ಲೂಕಿನ ಮೂಗಿನಗೊಂದಿ ಗ್ರಾಮದ ಆನಂದ ಪಾಟೀಲ್ ಎಂಬುವರ ಪತ್ನಿ ಭಾಗ್ಯಜ್ಯೋತಿ (41), ಪುತ್ರಿ ವೇದಿಕಾ (9) ಎಂದು ಗುರುತಿಸಲಾಗಿದೆ.
ಆಗಸ್ಟ್ 3 ರಂದು ಮಧ್ಯಾಹ್ನ 3 ಗಂಟೆ ಹೊತ್ತಿಗೆ ಹರಿಹರ ನಗರದ ರಾಘವೇಂದ್ರ ಮಠದ ಹಿಂಭಾಗದ ನದಿ ದಡದಲ್ಲಿ ಕಾಲು ಜಾರಿ ಬಿದ್ದಿದ್ದರು. ಇಬ್ಬರು ಮುಳುಗುತ್ತಿರುವುದನ್ನು ದೂರದಿಂದ ಮೀನುಗಾರರು ಗಮನಿಸಿದ್ದರು. ವಿಷಯ ತಿಳಿದು ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಅಂದೇ ಶೋಧ ಕಾರ್ಯ ನಡೆಸಿದ್ದರೂ ತಾಯಿ, ಮಗಳು ಪತ್ತೆಯಾಗಿರಲಿಲ್ಲ. ಶನಿವಾರ ಬೆಳಿಗ್ಗೆ 8ಕ್ಕೆ ತಾಯಿ ಭಾಗ್ಯಜ್ಯೋತಿ ದೇಹ ರಾಘವೇಂದ್ರ ಮಠದ ಹಿಂಭಾಗದಲ್ಲಿ ಮೀನುಗಾರರಿಗೆ ಕಂಡಿದೆ.
ಪತಿ ಆನಂದ ಪಾಟೀಲ್ , ತನ್ನ ಪತ್ನಿ ಭಾಗ್ಯಜ್ಯೋತಿ ತನ್ನ ಕಣ್ಣಿನಲ್ಲಿ ಕಂಡು ಬಂದ ನೋವಿಗೆ ಚಿಕಿತ್ಸೆ ಪಡೆಯಲೆಂದು ಗ್ರಾಮದಿಂದ ಹರಿಹರದ ಆಸ್ಪತ್ರೆಗೆ ತೆರಳಿದ್ದರು. ಅಂದು ಮಧ್ಯಾಹ್ನ ನದಿ ದಡದಲ್ಲಿ ಮಂಡಕ್ಕಿ ತಿನ್ನುವಾಗ ನದಿಗೆ ಜಾರಿ ಬಿದ್ದಿದ್ದಾರೆಂದು ತಿಳಿಸಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



