ದಾವಣಗೆರೆ: ಅವಲಕ್ಕಿ ಮಿಲ್ನ ಬೀಗವನ್ನು ಹೊಡೆದು ನಗದು ಕಳ್ಳತನ ಪ್ರಕರಣ ನಡೆದು 24 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜು.11ರಂದು ರಾತ್ರಿ 12.45ರ ಸುಮಾರಿಗೆ ಮಂಡಕ್ಕಿ ಭಟ್ಟಿ 1ನೇ ಕ್ರಾಸ್ ಬಾಲಾಜಿ ಟಾಕೀಸ್ ಹತ್ತಿರದ ಅನ್ವರ್ ಸಾಬ್ ಸೇರಿದ ಅವಲಕ್ಕಿ ಮಿಲ್ನ ಬೀಗವನ್ನು ಹೊಡೆದು ಮಿಲ್ನಲ್ಲಿದ್ದ 86,030 ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.
ಮೇಲ್ಕಂಡ ಪ್ರಕರಣದ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ . ಬಸರಗಿ, ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಇಮ್ರಾನ್ ಬೇಗ್ ನೇತೃತ್ವದಲ್ಲಿ ಪಿಎಸ್ ಐ ಪುಷ್ಪಲತಾ ಮತ್ತು ಸಿಬ್ಬಂದಿಗಳಾದ ಮಂಜುನಾಥ ನಾಯ್ಕ, ತಿಪ್ಪೇಸ್ವಾಮಿ ಬಿ, ಕೃಷ್ಣ ಎನ್,ವೆಂಕಟೇಶ, ನಾಗರಾಜ ಡಿ ಬಿ, ಹರೀಶ್ ಎಸ್.ಬಿ ಇವರುಗಳನ್ನು ಒಳಗೊಂಡ ತಂಡವು ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ಆರೋಪಿಗಳಾದ 1) ಖಾದರ್ ಬಾಷ (26), 2) ಮುಭಾರಕ್ (27) ಬಂಧಿಸಲಾಗಿದೆ. ಆರೋಪಿತರಿಂದ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 86,030 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ., ಐ.ಪಿ.ಎಸ್ ಪ್ರಶಂಸಿದ್ದಾರೆ.



