ದಾವಣಗೆರೆ:ಕೇಂದ್ರದ ಮಾಜಿ ಸಚಿವ ಹಾಗೂ ದಾವಣಗೆರೆ ಲೋಕಸಭಾ ಸದಸ್ಯ ಜಿ. ಎಂ. ಸಿದ್ದೇಶ್ವರ ಅವರಿಗೆ 71ನೇ ವರ್ಷದ ಜನ್ಮ ದಿನಕ್ಕೆ ಮಾಜಿ ಸಿಎಂಗಳಾದ ಬಿ. ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಎಂ.ಪಿ. ರೇಣುಕಾಚಾರ್ಯ, ಚಂದ್ರಪ್ಪ, ಬಿ.ಪಿ. ಹರೀಶ್, ಎಸ್.ಎ. ರವೀಂದ್ರನಾಥ್ ಬಿಜೆಪಿ ನಾಯಕರು ಶುಭ ಹಾರೈಸಿ, ಗುಣಗಾನ ಮಾಡಿದರು.
ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸಿದ್ದೇಶ್ವರ ಸೋಲಿಸಿರುವುದು ಅವಿಸ್ಮರಣೀಯ. ಸಿದ್ದೇಶ್ವರ ನನ್ನ ಆತ್ಮೀಯ, ಸರಳ, ಸಜ್ಜನ. ಪಕ್ಷದ ನಿಷ್ಠಾವಂತ ಕಾರ್ಯಕರ್ತ. ದಾವಣಗೆರೆ ಸಂಸದರಾಗಿ ಸಾಮಾಜಿಕ ಸೇವೆ, ಜನರ ಸೇವೆ ಮೂಲಕ ಪ್ರತಿ ಹಳ್ಳಿ ತಲುಪಿದ್ದಾರೆ ಎಂದರು.
ಸತತ ನಾಲ್ಕು ಬಾರಿ ಸಂಸದರಾಗಿ ಅನೇಕ ಕಾರ್ಯಕ್ರಮ ದಾವಣಗೆರೆ ಜಿಲ್ಲೆಗೆ ಜಾರಿಗೆ ತಂದು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ತಂದೆ ಮಲ್ಲಿಕಾರ್ಜುನಪ್ಪರ ಹಾದಿಯಂತೆ ಸಿದ್ದೇಶ್ವರ ನಡೆಯುತ್ತಿದ್ದಾರೆ.ದಾವಣಗೆರೆ ಸ್ಮಾರ್ಟ್ ಸಿಟಿ ಆಗಲು ಸಿದ್ದೇಶ್ವರ್ ಅವರೇ ಕಾರಣ. ಮೂಲತಃ ಶ್ರೀಮಂತ ಕುಟುಂಬದವರಾದರೂ ಬಡವರ ಪರ ಕೆಲಸ ಮಾಡಿದ್ದಾರೆ. ಇನ್ನಷ್ಟು ಒಳ್ಳೆಯ ಕೆಲಸ ಮಾಡುವಂತಾಗಲಿ. ಸುದ್ದೇಶ್ವರ ನೂರು ವರ್ಷ ಬದುಕಿ ಬಾಳಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಶುಭ ಹಾರೈಸುದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರುವಂತೆ ಮಾಡಿದವರು ಸಿದ್ದೇಶ್ವರ ಅವರು. ಅವರ ತಂದೆ ಮಲ್ಲಿಕಾರ್ಜುನಪ್ಪರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಸಿದ್ದೇಶ್ವರ ಅವರ ಕೊಡುಗೆ ಅಪಾರ ಎಂದು ಹೇಳಿದರು.
ಶಾಸಕರಾದ ಚಂದ್ರಪ್ಪ ಹಾಗೂ ಬಿ. ಪಿ. ಹರೀಶ್ ಮಾತನಾಡಿ, ಸಿದ್ದೇಶ್ವರ ಅವರು ನಾಲ್ಕು ಬಾರಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಸಿದ್ದೇಶ್ವರ ಅವರೇ ಅಭ್ಯರ್ಥಿಯಾಗಬೇಕು ಎಂದು ಹೇಳಿದರು.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಸಿದ್ದೇಶ್ವರ ಅವರ ರಾಜಕೀಯ ನಡೆ ಆದರ್ಶ. ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಸೋತೇ ಇಲ್ಲ. ಅವರಿಂದ ಮತ್ತಷ್ಟು ಜನಪರ ಕಾರ್ಯಗಳಾಗಲಿ ಎಂದರು.



