ದಾವಣಗೆರೆ: ಹರಿಹರ ತಾಲ್ಲೂಕಿನ ರಾಜನಹಳ್ಳಿ ಶ್ರೀ ವಾಲ್ಮೀಕಿ ಮಹಾಸಂಸ್ಥಾನದ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ಸೂಪರ್ ಸೀಡ್ ಮಾಡುವಂತೆ ಕೋರಿ ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಾಯಕ ಸಮಾಜದ ಮುಖಂಡರು ಮೊರೆ ಹೋಗಿದ್ದಾರೆ.
ವಾಲ್ಮೀಕಿ ಗುರುಪೀಠ ಟ್ರಸ್ಟ್ ನ ಗೌರವಾಧ್ಯಕ್ಷರು ಮತ್ತು ಮಹಾಸಂಸ್ಥಾನದ ಪೀಠಾಧಿಪತಿ ಆಗಿರುವ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಧರ್ಮದರ್ಶಿ, ಸಚಿವ ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷ ಟಿ.ಓಬಳಪ್ಪ, ಧರ್ಮದರ್ಶಿ ಡಾ. ಜಿ. ರಂಗಯ್ಯ ಸೇರಿದಂತೆ ಟ್ರಸ್ಟ್ನ 28 ಜನರ ವಿರುದ್ಧ ನ್ಯಾಯಾಲಯದಲ್ಲಿ ನಾಯಕ ಸಮಾಜದ ಮಾಜಿ ಅಧ್ಯಕ್ಷ, ವಕೀಲ ಗುಮ್ಮನೂರು ಮಲ್ಲಿಕಾರ್ಜುನಪ್ಪ ನೇತೃತ್ವದಲ್ಲಿ ಬುಡಕಟ್ಟು ಸಮುದಾಯದ ಅಧ್ಯಕ್ಷ ಎಸ್.ಹೆಚ್. ಸುಭಾಷ್, ಪಿ. ರಾಧಕೃಷ್ಣ, ಪ್ರಶಾಂತ ರಾಮಪ್ಪ ದಳವಾಯಿ, ಆಂಜನೇಯ ಹುಬ್ಬಳ್ಳಿ, ಮಾರಣ್ಣ ಪಾಳೇಗಾರ್ ಸೇರಿದಂತೆ ಹತ್ತು ಜನರ ತಂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ವಾಲ್ಮೀಕಿ ಸಮಾಜದ ಅಭಿವೃದ್ಧಿಗಾಗಿ 1998ರಲ್ಲಿ ಮಹಾಸಂಸ್ಥಾನದ ಪೀಠಾಧಿಪತಿ ಮತ್ತು ಟ್ರಸ್ಟ್ ನ ಅಧ್ಯಕ್ಷರಾಗಿ ಶ್ರೀ ಪುಣ್ಯಾನಂದಪುರಿ ಸ್ವಾಮೀಜಿ ನೇಮಗೊಂಡಿದ್ದರು. ಅವರ ಅಕಾಲಿಕ ಮರಣದ ನಂತರ ಪೀಠಾಧ್ಯಕ್ಷರಾಗಿ ಪ್ರಸನ್ನಾನಂದಪುರಿ ಸ್ವಾಮೀಜಿ 2016ರಲ್ಲಿ ಟ್ರಸ್ಟ್ ಪುನರ್ ರಚನೆ ಮಾಡುವ ಸಂದರ್ಭದಲ್ಲಿ ನಾಯಕ ಸಮಾಜದವರನ್ನು ಹೊರತು ಪಡಿಸಿ ಅನ್ಯ ಜಾತಿಯವರಿಗೆ ಟ್ರಸ್ಟ್ ನಲ್ಲಿ ಸ್ಥಾನ ನೀಡಿರುವುದು, ಲೆಕ್ಕಪತ್ರ ನಿರ್ವಹಣೆ ಮಾಡದಿರುವುದು ಸೇರಿದಂತೆ ಟ್ರಸ್ಟ್ ನ ಮೂಲ ಉದ್ದೇಶವನ್ನೇ ಗಾಳಿಗೆ ತೂರಿದ್ದಾರೆ. ಇದು ಕಾನೂನುಬಾಹಿರವಾಗಿದೆ ಎಂದು ದೂರಿನಲ್ಲಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಸನ್ನಾನಂದ ಸ್ವಾಮೀಜಿ ಅವರು ಮಠದ ಸ್ಥಿರ ಮತ್ತು ಚರಾಸ್ತಿಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಆರೋಪ ಮಾಡಿದ್ದಾರೆ. ವಾಲ್ಮೀಕಿ ಜಾತ್ರೆಗೆ ಪರಿಶಿಷ್ಟ ಪಂಗಡಗಳ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಮಠದಲ್ಲಿ ಶಿಕ್ಷಣಕ್ಕೆ ಮಾನ್ಯತೆ ನೀಡಲಾಗಿಲ್ಲ, ಅಲ್ಲದೇ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದ್ದಾರೆ.
ದೂರುದಾರ ವಕೀಲ ಗುಮ್ಮನೂರು ಮಲ್ಲಿಕಾರ್ಜುನಪ್ಪ ಮಾತನಾಡಿ, ಪ್ರಸನ್ನಾನಂದ ಸ್ವಾಮೀಜಿ ಅವರು ನಡೆಸಿರುವ ಮೀಸಲಾತಿ ಹೋರಾಟವೇ ಕಾನೂನು ಬಾಹಿರವಾಗಿತ್ತು. ಅವರ ಹೋರಾಟದಿಂದ ಸಮಾಜಕ್ಕೆ ಮೀಸಲಾತಿ ಹೆಚ್ಚಳವಾಗಿಲ್ಲ. ತಮ್ಮ ಅಧ್ಯಕ್ಷತೆಯಲ್ಲಿ ಟ್ರಸ್ಟ್ನಲ್ಲಿ ನಡೆಯುತ್ತಿರುವ ನಿಯಮಬಾಹಿರ ಕಾರ್ಯಗಳನ್ನು ಮುಚ್ಚಿಹಾಕಲು ಹೋರಾಟ ಮಾಡುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಅವರು ಹವಣಿಸಿದರು. ಹೀಗಾಗಿ ಜಿಲ್ಲಾ ಸತ್ರ ನ್ಯಾಯಾಲಯವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಟ್ರಸ್ಟ್ ಸೂಪರ್ ಸೀಡ್ ಮಾಡಬೇಕೆಂದು ಆಗ್ರಹಿಸಿದ್ದಾರೆ.



