ದಾವಣಗೆರೆ: ರಾಮಪ್ಪ ಗೆಲ್ಲುತ್ತಾರೆಂದು ಐದು ಸರ್ವೇಗಳು ವರದಿ ಇತ್ತು. ನಾನೇ ಸ್ಪರ್ಧಿಸಿದ್ದರೆ ಖಂಡಿತ 25 ಸಾವಿರದಷ್ಟು ಮತಗಳಲ್ಲಿ ಗೆದ್ದೇ ಗೆಲ್ಲುತ್ತಿದ್ದೆ. ಆದರೆ, ಕೆಲ ಕಾಣದ ಕೈಗಳು ನನಗೆ ಬಿ-ಫಾರಂ ತಪ್ಪಿಸಿದವು ಎಂದು ಹರಿಹರ ಕ್ಷೇತ್ರದ ಕಾಂಗ್ರೆಸ್ನ ಮಾಜಿ ಶಾಸಕ ಎಸ್. ರಾಮಪ್ಪ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ವಿರೋಧ ಪಕ್ಷದಲ್ಲಿದ್ದರೂ 600 ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈಗಲೂ ನಾನು ತಂದ 70-80 ಕೋಟಿಯ ಕಾಮಗಾರಿ ನಡೆಯುತ್ತಿವೆ. ಹೈಕಮಾಂಡ್ ಜೊತೆಗೆ ಚೆನ್ನಾಗಿದ್ದೆ. ಆದರೂ, ಕಾಣದ ಕೈಗಳು ನನಗೆ ಬಿ-ಫಾರಂ ತಪ್ಪಿಸಿದವು ಎಂದರು.
ಪಂಚಮಸಾಲಿ, ನಮ್ಮ ಸಮಾಜ, ವಾಲ್ಮೀಕಿ ಸ್ವಾಮೀಜಿಯವರು ಪತ್ರ ಬರೆದಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಆದರೆ, ಅವರು ಪತ್ರ ಬರೆದಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ನಾನು ಎಲ್ಲಾ ಸ್ವಾಮೀಜಿಗಳೊಂದಿಗೆ ಚೆನ್ನಾಗಿ ಇದ್ದೇನೆ. ನನಗೆ ಯಾರು ಬಿ-ಫಾರಂ ತಪ್ಪಿಸಿದರು ಎಂಬುದು ಜನರಿಗೆ ಗೊತ್ತಿದೆ ಎಂದು ತಿಳಿಸಿದರು.
ನನಗೆ ವಿಧಾನ ಪರಿಷತ್ತು ಸದಸ್ಯತ್ವ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಸಲ್ಲಿಸಿದ್ದೇನೆ. ರಾಮಪ್ಪನಿಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸಬೇಕು ಎಂದು ಅನೇಕರು ಹೇಳಿದ್ದಾರೆ. ನಾನು ಎಂಎಲ್ಸಿ ಸ್ಥಾನವನ್ನೇ ಕೊಡಬೇಕು ಎಂದು ಕೇಳಿದ್ದೇನೆ. ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟರೂ ಹೈಕಮಾಂಡ್ ತೀರ್ಮಾನವನ್ನ ಒಪ್ಪುತ್ತೇನೆ ಎಂದರು.



