ನವದೆಹಲಿ: ಈ ಬಾರಿಯ ಮುಂಗಾರು ಮಳೆ ಜೂ.4ರಿಂದ ಶುರುವಾಗಲಿದೆ ಎಂದು ಹೇಳಿದ್ದ ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಹೊಸ ಮುನ್ನೆಚ್ಚರಿಕೆ ನೀಡಿದ್ದು, ಜೂ.1ರಿಂದಲೇ ಮುಂಗಾರು ಮಳೆ ಶುರುವಾಗಲಿದೆ ಎಂದು ತಿಳಿಸಿದೆ.
ಮುಂಗಾರು ಮಳೆಗೆ ಕಾರಣವಾಗುವ ನೈಋತ್ಯ ಮಾರುತಗಳು ಬಂಗಾಲ ಕೊಲ್ಲಿಯ ಆಗ್ನೇಯ ಭಾಗ, ದಕ್ಷಿಣ ಅಂಡಮಾನ್ ಸಮುದ್ರದ ಭಾಗದಲ್ಲಿ ಏಳಲು ಶುರುವಾಗಿವೆ. ಹೀಗಾಗಿ ನಿರೀಕ್ಷೆಯಂತೆಯೇ ಜೂ.1ರಿಂದಲೇ ಮಳೆಗಾಲ ಶುರುವಾಗುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಮುಂದಿನ ಐದು ದಿನಗಳಲ್ಲಿ ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಮೂರರಿಂದ ನಾಲ್ಕು ದಿನಗಳ ನಂತರ ಮುಂಗಾರು ಮಳೆಯ ಸೂಚನೆಗಳು ಮತ್ತಷ್ಟು ಪ್ರಬಲವಾಗಲಿದೆ. ಕಳೆದ ವರ್ಷ ಮೇ 29ರಂದು ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿತ್ತು. 2021ರಲ್ಲಿ ಜೂ.3 ಮುಂಗಾರು ಪ್ರವೇಶಿಸಿತ್ತು.



