ಡಿವಿಜಿ ಸುದ್ದಿ, ಹಾಸನ: ನನಗೆ ಇನ್ನು ನಿವೃತ್ತಿಯಾಗುವ ರಾಜಕೀಯ ವಯಸ್ಸಾಗಿಲ್ಲ, ವೈರಾಗ್ಯ ಬಂದಿಲ್ಲ, ರಾಜ್ಯವನ್ನು ಮುನ್ನಡೆಸುವ ಆರೋಗ್ಯ ಇದ್ದು, ಸಮಯಕ್ಕಾಗಿ ಕಾಯುತ್ತಿದ್ದೇನೆ ಎನ್ನುವ ಮೂಲಕ ರಾಜಕೀಯ ನಿವೃತ್ತಿ ಊಹಾಪೋಹಕ್ಕೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತೆರೆ ಎಳೆದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ತೆಗೆಯಲು ಹೋಗಲ್ಲ. ಯಾರಿಗೂ ಹೆದರಿ ಪಲಾಯನ ವಾದ ಮಾಡಲ್ಲ. ಈಗ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳುವ ಕೆಲಸ ಮಾಸ್ತೀನಿ. ಅದಕ್ಕಾಗಿ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೇನೆ ಎಂದ್ರು.
ಈಗಾಗಲೇ ನನ್ನ ನಮ್ಮ ಕುಟುಂಬದವರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಜನರಿಗೆ ಎಲ್ಲವೂ ಗೊತ್ತಿದೆ. ನಾನು ಥೂ, ಛೀ ಎನಿಸಿಕೊಂಡು ರಾಜಕೀಯ ಮಾಡಲ್ಲ, ಅಷ್ಟು ಸುಲಭವಾಗಿ ರಾಜಕೀಯ ಬಿಟ್ಟು ಹೋಗಲ್ಲ, ಜನರ ಪ್ರೀತಿ ಇರುವವರೆಗೆ ರಾಜಕೀಯದಲ್ಲಿ ಮುಂದುವರಿಯುವೆ ಎಂದು ತಿಳಿಸಿದರು.
ಸಂಕ್ರಾಂತಿ ನಂತರ ಕ್ರಾಂತಿಕಾರಿ ಬದಲಾವಣೆ
ನಮ್ಮ ಪಕ್ಷ ರಾಜಕೀಯವಾಗಿ ಇನ್ನಷ್ಟು ಗಟ್ಟಿಯಾಗಿ ನೆಲೆಯೂರಬೇಕಿದೆ. ಇದಕ್ಕಾಗಿ ಪಕ್ಷ ಸಂಘಟನೆಗೆ ಒತ್ತು ನೀಡಲು ಪಕ್ಷದ ಹಿರಿಯ ನಾಯಕರು ಸೂಚಿಸಿದ್ದಾರೆ. ಸಂಕ್ರಾಂತಿ ನಂತರ ಕ್ರಾಂತಿಕಾರಿ ಬದಲಾವಣೆ ನಡೆಯಲಿದೆ ಎಂದು ತಿಳಿಸಿದರು.



