ಡಿವಿಜಿಸುದ್ದಿ, ದಾವಣಗೆರೆ: ವಿದ್ಯಾರ್ಥಿಗಳು ಕೆಲಸ ಪಡೆಯಲು ಸ್ಫಧಾತ್ಮಕ ಪರೀಕ್ಷೆ ಎದುರಿಸಬೇಕಿದ್ದು, ಮೊಬೈಲ್ ಬಳಕೆಗೆ ಕಡಿವಾಣ ಹಾಕಿ ವಿದ್ಯಾಭ್ಯಾಸದ ಕಡೆ ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.
ನಗರದ ಎ.ವಿ.ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಸೈಬರ್ ಅಪರಾಧಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಇಂದು ಮೊಬೈಲ್ ಗೀಳಿಗೆ ಒಳಾಗಾಗಿ ಬರವಣಿಗೆ ಕೌಶಲ್ಯವನ್ನು ಮರೆಯುತ್ತಿದ್ದಾರೆ. ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕಗಳನ್ನು ಓದುವೆಡೆ ಗಮನ ಹರಿಸಬೇಕು ಎಂದರು.
ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಯುವಜನತೆ ಎಚ್ಚರಿಕೆಯನ್ನು ವಹಿಸಬೇಕು. ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್ಗಳನ್ನು ಓಕೆ ಮಾಡಬಾರದು. ಫೇಸ್ಬುಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವೈಯಕ್ತಿಕ ದಾಖಲೆಯನ್ನು ಅಪ್ಡೇಟ್ ಮಾಡಬಾರದು ಎಂದು ಹೇಳಿದರು.
ಮಹಿಳಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆದ ಕಿರಣ್ ಮಜುಮ್ದಾರ್, ವಿಜಯಲಕ್ಷೀ ಬಿದರಿಯಂತಹ ಮಹಿಳಾ ಸಾಧಕರ ಹಾದಿಯಲ್ಲಿ ವಿದ್ಯಾರ್ಥಿನಿಯರು ಸಾಗಬೇಕು. ಯುವತಿಯರು ಹೆಚ್ಚಾಗಿ ಸೈಬರ್ ಪ್ರಕರಣಗಳಲ್ಲಿ ಅನಗತ್ಯ ತೊಂದರೆಗೆ ಒಳಗಾಗುತ್ತಿದ್ದು ಎಚ್ಚರಿಕೆಯಿಂದ ಇರಬೇಕು ಹಾಗೂ ಮಹಿಳೆಯರ ಸುರಕ್ಷತೆಗಾಗಿ ಅನೇಕ ಕಾನೂನು ಮತ್ತು ಕಾಯ್ದೆಗಳಿದ್ದು ಅದರ ಸದುಪಯೋಗ ಪಡೆಯಬೇಕೆಂದರು.
ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುಷ್ತಾಕ್ ಅಹಮದ್ ಮಾತನಾಡಿ, ಆನ್ಲೈನ್ ವ್ಯವಹಾರಗಳಲ್ಲಿ ಮತ್ತು ಬ್ಯಾಂಕಿಂಗ್ ವಹಿವಾಟಿನಲ್ಲಿ ವಿವಿಧ ರೀತಿಯಲ್ಲಿ ಜನತೆ ಈ ಸೈಬರ್ ಪ್ರಕರಣಗಳಲ್ಲಿ ವಂಚನೆಗೆ ಒಳಗಾಗುತ್ತಿದ್ದಾರೆ. ಎ.ಟಿ.ಎಮ್ ಪಿನ್, ಓ.ಟಿ.ಪಿ ಮತ್ತು ಸಿ.ವಿ.ವಿ ಗಳನ್ನು ಯಾವುದೇ ಬ್ಯಾಂಕ್ ಅಧಿಕಾರಿಗಳು ಕೇಳುವಂತಿಲ್ಲ. ಆದ್ದರಿಂದ ನಿಮಗೆ ಯಾವುದೇ ಬ್ಯಾಂಕ್ನಿಂದ ಕರೆಗಳು ಬಂದರೂ ಈ ಮಾಹಿತಿಗಳು ನೀಡಬೇಡಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ವಿ ಕಮಲಮ್ಮ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಶಿವಪ್ರಕಾಶ್ ಪಿ.ಎಸ್ ಮಾತನಾಡಿ, ಸೈಬರ್ ಅಪರಾಧದ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡಿಸಲು ಇಂತಹ ಕಾರ್ಯಕ್ರಮಗಳು ಬಹಳ ಉಪಯುಕ್ತವಾಗಿದೆ. ಪೊಲೀಸ್ ವರಿಷ್ಠಾಧಿಕಾರಿಗಳು ಇಂತಹ ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ ಹಮ್ಮಿಕೊಂಡಿರುವುದು ಸಂತಸದ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಕುಮಾರ್, ಬೋಧಕ ಹಾಗೂ ಬೋಧಕೇತರ ವರ್ಗದವರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.