ದಾವಣಗೆರೆ: ಲೋಕಾಯುಕ್ತ ಕೇಸ್ ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ಗೆ ಬಿಜೆಪಿ ಟಿಕೆಟ್ ಕೈ ತಪ್ಪಿದೆ. ಇದರಿಂದ ಅಭಿಮಾನಿಗಳು ಇಂದು ಬೆಳಗ್ಗೆ ಚನ್ನಗಿರಿಯಲ್ಲಿ ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಘೋಷಣೆ ಕೂಗುದರು. ಕೂಡಲೇ ಬೆಂಗಳೂರಿಂದ ಆಗಮಿಸಿದ ಮಲ್ಲಿಕಾರ್ಜುನ, ಬೆಂಬಲಿಗರ ಸಭೆ ನಡೆಸಿ ಪಕ್ಷದ ಹಿರಿಯರ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಚನ್ನಗಿರಿ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಮಾಡಾಳ್ ಮಲ್ಲಿಕಾರ್ಜುನ, ಚನ್ನೇಶಪುರ ಗ್ರಾಮದಲ್ಲಿ ಕಾರ್ಯಕರ್ತರ ಮುಖಂಡರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿದ್ದಾರೆ.ಈ ಸಭೆಗೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಭಾಗಿಯಾಗುವ ಮೂಲಕ ಮಾಡಾಳ್ ಮಲ್ಲಿಕಾರ್ಜುನ್ ಅವರಿಗೆ ಪಕ್ಷೇತರರಾಗಿ ನಿಲ್ಲುವಂತೆ ಸಲಹೆ ನೀಡಿದರು.
ಸಭೆ ಬಳಿಕ ಮಾತನಾಡಿ, ನೀಡಿದ ಮಾಡಾಳ್ ಮಲ್ಲಿಕಾರ್ಜುನ್, ಬಿಜೆಪಿ ಪಕ್ಷದ ಮುಖಂಡರು ಹಿರಿಯರು, ಸಂಘದ ಪ್ರಮುಖರ ಅಭಿಪ್ರಾಯ ಪಡೆದು ಮುಂದೆ ನಡೆಯುವೆ. ಪಕ್ಷ ಈಗಾಗಲೇ ಒಬ್ಬರಿಗೆ ಟಿಕೆಟ್ ಘೋಷಣೆ ಮಾಡಿದೆ. ಪಕ್ಷದ ಬಗ್ಗೆ ಇನ್ನು ಅಪಾರವಾದ ಗೌರವ ಇದೆ. ಈಗಾಗಲೇ ನಮ್ಮ ಪಕ್ಷದ ಹಿರಿಯೊಬ್ಬರು ಕರೆ ಮಾಡಿದ್ದರಿಂದ ಅವರೊಂದಿಗೆ ಮಾತನಾಡಿಲ್ಲ. ಈ ಸಭೆ ಬಳಿಕ ಅವರ ಸಲಹೆ ಪಡೆದು ನನ್ನ ನಿರ್ಧಾರ ತಿಳಿಸುವೆ ಎಂದರು.
ಇನ್ನು ಚನ್ನಗಿರಿ ಕ್ಷೇತ್ರದಲ್ಲಿ ಪಕ್ಷೇತರನಾಗಿ ಸ್ಪರ್ಧೆ ಮಾಡುವ ಬಗ್ಗೆ ಈಗಲೇ ಏನು ಹೇಳುವುದಿಲ್ಲ, ಪಕ್ಷದ ಕಾರ್ಯಕರ್ತರು ಮುಖಂಡರು ಸಭೆಯಲ್ಲಿ ಸಾಕಷ್ಟು ಅಭಿಪ್ರಾಯ ಹೇಳಿದ್ದಾರೆ. ಆದರೆ ಈಗಲೇ ಯಾವ ತೀರ್ಮಾನವನ್ನೂ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ನಾನಿಲ್ಲ. ಇನ್ನು ಟಿಕೆಟ್ ಕೈತಪ್ಪಿದ್ದಕ್ಕಾಗಿ ನಾನು ನನ್ನ ಕಾರ್ಯಕರ್ತರು ಅಭಿಮಾನಿಗಳು ನೋವಿನಲ್ಲಿದ್ದೇವೆ. ಹಾಗಾಗಿ ಪಕ್ಷದ ಹಿರಿಯರ ಸಲಹೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
ಚನ್ನೇಶಪುರ ನಿವಾಸದ ಬಳಿ ಸೇರಿ ಕಾರ್ಯಕರ್ತರು ‘ಬೇಕೇ ಬೇಕು ನ್ಯಾಯ ಬೇಕು ಎಂದು’ ಬಿಜೆಪಿ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದರು.ನೀವು ನಿಮ್ಮ ನಿರ್ಧಾರವನ್ನು ತಿಳಿಸುವ ತನಕ ಈ ಸ್ಥಳದಿಂದ ನಾವು ಕದಲುವುದಿಲ್ಲ ಎಂದು ಕಾರ್ಯಕರ್ತರು ಅಭಿಮಾನಿಗಳು ಪಟ್ಟು ಹಿಡಿದರು. ರಾಜ್ಯ ನಾಯಕರ ಬಳಿ ಮಾತನಾಡಿ ಮುಂದಿನ ನಿರ್ಧಾರ ಮಾಡುವುದಾಗಿ ಹೇಳುತ್ತೇನೆ. ನಾನು ಸಂಘ ಪರಿವಾರದವರನ್ನು ಭೇಟಿಯಾಗಿ ಚರ್ಚೆ ಮಾಡಿ ಇಲ್ಲಿನ ಸ್ಥಿತಿಯನ್ನು ಮನವರಿಕೆ ಮಾಡುವೆ ಎಂದರು.



