ದಾವಣಗೆರೆ: ಕರ್ನಾಟಕ ವಿಧಾನಸಭಾ ಚುನಾಚವಣೆ ನೀತಿ ಸಂಹಿತೆ ಜಾರಿ ನಂತರ ಈವರೆಗೆ ಜಿಲ್ಲೆಯಲ್ಲಿ ನಗದು ಸಹಿತ ಒಟ್ಟು 93,42,496 ರೂಪಾಯಿ ಮೊತ್ತದ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಮಾಹಿತಿ ನೀಡಿದ್ದಾರೆ.
2,53,400 ರೂಪಾಯಿ ಮೊತ್ತದ 6,627 ಲೀಟರ್ ಮದ್ಯ, ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 42,6,208 ರೂಪಾಯಿ ನಗದು, 56,100 ರೂಪಾಯಿ ಮೌಲ್ಯದ 3.2 ಕೆ.ಜಿ ನಿಕೋಟಿನ್ಸ್ ಮತ್ತು ಅಕ್ರಮವಾಗಿ ಸಾಗಿಸುತ್ತಿದ್ದ 66.7 ಕೆ.ಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆ ಅಕ್ರಮ ಕಂಡುಬದಲ್ಲಿ ಫೋಟೋ ತೆಗೆದು ಸಿ-ವಿಜಲ್ ದೂರ ಆ್ಯಪ್ನಲ್ಲಿ ಅಪ್ಲೋಡ್ ಮಾಡಬಹುದು. ಚುನಾವಣಾ ಆಯೋಗ ಈ ದೂರುಗಳ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಚುನಾವಣಾ ಅಕ್ರಮಗಳ ಕುರಿತಂತೆ ದೂರು ದಾಖಲಿಸಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ಸಹಾಯವಾಣಿ 1950 ಸಂಖ್ಯೆಗೆ ಉಚಿತ ಕರೆ ಮಾಡಿ ಮಾಹಿತಿ ನೀಡಬಹುದು. ಹಾಗೂ ಮತದಾರರು ತಮ್ಮ ಹೆಸರು ಸೇರಿದಂತೆ ಚುನಾವಣಾ ಮಾಹಿತಿಗಾಗಿ ಮೊಬೈಲ್ನ ಪ್ಲೇಸ್ಟೋರ್ನಲ್ಲಿ ವೋಟರ್ ಹೆಲ್ಪ್ಲೈನ್ ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಮತದಾರರು ನ್ಯಾಯಸಮ್ಮತ, ಪಾರದರ್ಶಕ ಚುನಾವಣೆಗೆ ಸಹಕರಿಸುವಂತೆಯೂ ಮನವಿ ಮಾಡಿಕೊಂಡರು.
ಈಗಾಗಲೇ ಜಿಲ್ಲಾದ್ಯಂತ ಆಯ್ದ ಸ್ಥಳಗಳಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಹಾಗೆಯೇ ಪ್ರತಿ ಚಲನವಲಗಳ ಬಗ್ಗೆ ನಿಗಾವಹಿಸಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್ ತಂಡ, ಸ್ಥಿರ ಕಣ್ಗಾವಲು ತಂಡ, ಸೆಕ್ಟರ್ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಗತ್ಯ ಸೇವಾನಿರತ 12 ಇಲಾಖೆಗಳಿಗೆ ಅಂಚೆ ಮತದಾನದ ವ್ಯವಸ್ಥೆ ಜಾರಿಗೆ ತಂದಿದೆ. ಚುನಾವಣಾ ಕರ್ತವ್ಯದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಂಚೆ ಮತದಾನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಅಲ್ಲದೆ ವಿಶೇಷ ಚೇತನ ಮತದಾರರಿಗೆ ಹಾಗೂ 80 ವರ್ಷ ಮೇಲ್ಪಟ್ಟ ಹಿರಿಯ ಮತದಾರರಿಗೆ ಅವರು ಇಚ್ಚಿಸಲ್ಪಟ್ಟರೆ ಮನೆಯಲ್ಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ದಾವಣಗೆರೆ ನಗರದ ಉತ್ತರ ಮತ್ತು ದಕ್ಷಿಣ ಮತ ಕ್ಷೇತ್ರದಲ್ಲಿ ತಲಾ ಒಂದು ವಿಶೇಷ ಚೇತನರ ಮತಗಟ್ಟೆ, ದಾವಣಗೆರೆ ತಾಲೂಕಿನಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ ರೀತಿಯಲ್ಲಿ ಲಂಬಾಣಿ ತಾಂಡಾವೊಂದರಲ್ಲಿ ವಿಶೇಷ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಹಾಗೂ ಯುವ ಜನರೇ ನಿರ್ವಹಿಸುವ ಮತಗಟ್ಟೆ ಹಾಗೂ ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ.ಬಿ.ಆರ್.ರಂಗನಾಥ್ ಕುಳಗಟ್ಟೆ ಸೇರಿದಂತೆ ಮತ್ತಿತರರು ಇದ್ದರು.