ದಾವಣಗೆರೆ: ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿಂದು ಮತದಾನ ನಡೆಯಿತು. ವಿಧಾನಸಭಾ ಕ್ಷೇತ್ರದ ಶಕ್ತಿ ಕೇಂದ್ರದ ಪ್ರಮುಖರು, ಪ್ರಭಾರಿಗಳು ಮತ ಮಾಡುವುದರೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಚನ್ನಗಿರಿ,ಹೊನ್ನಾಳಿ, ಹರಿಹರ, ಮಾಯಕೊಂಡ, ಜಗಳೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ವೋಟಿಂಗ್ ನಡೆಯಿತು. ದಾವಣಗೆರೆ ಉತ್ತರ ಹಾಗೂ ದಾವಣಗೆರೆ ದಕ್ಷಿಣದಲ್ಲಿ ಹೆಚ್ಚಿನ ಆಕಾಂಕ್ಷಿಗಳಿದ್ದು, ಪ್ರಮುಖ ಮೂವರ ಹೆಸರಿಗೆ ಮತ ಅಥವಾ ಚೀಟಿಯಲ್ಲಿ ಹೆಸರು ಬರೆಯುವ ಮೂಲಕ ಅಭಿಪ್ರಾಯ ತಿಳಿಸಿದರು.
ಮಾಯಕೊಂಡದಲ್ಲಿ ಹೊಸಬರು, ಚನ್ನಗಿರಿಯಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧಿತರಾಗಿರುವ ಕಾರಣ ಬೇರೆ ಅಭ್ಯರ್ಥಿಗಳು ಆಯ್ಕೆ ಸಾಧ್ಯತೆ ಇದೆ. . ಜಗಳೂರಿನಿಂದ ಎಸ್. ವಿ. ರಾಮಚಂದ್ರ, ಹೊನ್ನಾಳಿಯಿಂದ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.
ಯಾರಿಗೆ ಟಿಕೆಟ್ ಸಿಕ್ಕರೂ ಒಟ್ಟಾಗಿ ಕೆಲಸ ಮಾಡಬೇಕು. ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವನ್ನು ಬಿಜೆಪಿ ಪ್ರಮುಖರಿಗೆ ಕಳುಹಿಸಲಾಗುವುದು. ಸರ್ವೆ, ನಿಮ್ಮ ಅಭಿಪ್ರಾಯ, ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಅಂತಿಮವಾಗಿ ಕೇಂದ್ರದ ಸಂಸದೀಯ ಮಂಡಳಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯಾರಿಗೆ ಟಿಕೆಟ್ ಘೋಷಣೆಯಾದರೂ ಎಲ್ಲರೂ ಗೆಲುವಿಗೆ ಶ್ರಮಿಸಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್. ಎ. ರವೀಂದ್ರನಾಥ್, ಎಸ್. ವಿ. ರಾಮಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಮತ್ತಿತರರು ಹಾಜರಿದ್ದರು.



