ದಾವಣಗೆರೆ: ನೀರು ಪೂರೈಕೆಯಲ್ಲಿ ವ್ಯತ್ಯಯ; ಕುಂದವಾಡ ಕೆರೆಗೆ ವಿಪಕ್ಷ ನಾಯಕರ ಭೇಟಿ; ಅಸಮರ್ಪಕ ನಿರ್ವಹಣೆ‌ ವಿರುದ್ಧ ಕಿಡಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ದಾವಣಗೆರೆ: ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮರ್ಪಕ ಪೂರೈಕೆಯಲ್ಲಿನ ವ್ಯತ್ಯಯದಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದ ತಂಡ ಕುಂದುವಾಡ ಕೆರೆ ಹಾಗೂ ಟಿ. ಬಿ. ಸ್ಟೇಷನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಂದುವಾಡ ಕೆರೆಯಿಂದ ನಗರಕ್ಕೆ ನೀರು ಸರಬರಾಜು ಮಾಡಲು ಬಳಕೆಯಾಗುವ ಎರಡು ಮೋಟಾರ್ ಗಳು ಹಾಳಾಗಿವೆ. ಇನ್ನು ಒಂದು ಹಾಳಾದರೆ ಮತ್ತೊಂದು ಉಪಯೋಗಕ್ಕೆ ಇಟ್ಟುಕೊಂಡಿದ್ದ ಮೋಟಾರ್ ಸಹ ಕೆಟ್ಟು ಹೋಗಿರುವುದರಿಂದ
ಹಳೆ ದಾವಣಗೆರೆ ಹಾಗೂ ಹೊಸ ದಾವಣಗೆರೆಯ ಕೆಲವು ಪ್ರದೇಶಗಳಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಆಗಿದೆ. ಜಲಸಿರಿ ಯೋಜನೆಯಡಿ ಕಾಮಗಾರಿ ನಡೆಸುವ ವೇಳೆ ಮೋಟಾರ್ ಗೆ ಧಕ್ಕೆಯಾಗಿರುವ ಕಾರಣ ಈ ಸಮಸ್ಯೆ ತಲೆದೋರಿದೆ.

ಈ ವೇಳೆ ಮೋಟಾರ್ ಹಾಳಾಗಿರುವುದು ಗಮನಕ್ಕೆ ಬಂತು. ಕಳೆದ ಬಾರಿ ಉತ್ತಮ ಮಳೆಯಾಗಿದೆ. ನೀರು ಸಂಗ್ರಹವಾಗಿದೆ. ಆದ್ರೆ, ಕೆಲವೊಂದು ಪ್ರದೇಶಗಳಲ್ಲಿ ನಾಲ್ಕೈದು ದಿನಕ್ಕೊಮ್ಮೆ, ಕೆಲವೆಡೆ ಹತ್ತು ದಿನಕ್ಕೊಮ್ಮೆ ಕುಡಿಯುವ ನೀರು ಹರಿಸಲಾಗುತ್ತಿದೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣಕ್ಕೆ ಈ ಸಮಸ್ಯೆಯಾಗಿದೆ. ಬೇಸಿಗೆ ಕಾಲ ಬರುತ್ತಿದೆ. ಮೊದಲೇ ಈ ರೀತಿಯ ಸಮಸ್ಯೆಯಾದರೆ ಬೇಸಿಗೆ ವೇಳೆ ಜನರು ನೀರಿಗಾಗಿ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿ ವರ್ಗದವರು ಈ ಬಗ್ಗೆ ಹೆಚ್ಚು ಗಮನ ಹರಿಸಿ ಸಮಸ್ಯೆ ಕೂಡಲೇ ಪರಿಹರಿಸಬೇಕು ಎಂದು ಮಂಜುನಾಥ್ ಆಗ್ರಹಿಸಿದರು.

ಕುಂದುವಾಡ ಕೆರೆಯಿಂದ ನೀರು ಪೂರೈಕೆ ಮಾಡಲು ತೊಂದರೆ ಆಗಿರುವ ಕಾರಣ ರಾಜನಹಳ್ಳಿ ಪಂಪ್ ಹೌಸ್ ನಿಂದ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ. ಹಳೆ ದಾವಣಗೆರೆಯಲ್ಲಿ ಏಳೆಂಟು ದಿನಕ್ಕೊಮ್ಮೆ ಕೆಲವೆಡೆ ನೀರು ಸರಬರಾಜು ಮಾಡಲಾಗುತಿತ್ತು. ಹೊಸ ದಾವಣಗೆರೆಯ ಕೆಲವೆಡೆ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಹರಿಸಲಾಗುತಿತ್ತು. ಸಮಸ್ಯೆಯಾಗಿರುವ ಕಾರಣ ಎರಡರಿಂದ ಮೂರು ದಿನ ತಡವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದು ಪಾಲಿಕೆಯ ಎಕ್ಸಿಕ್ಯೂಟೀವ್ ಎಂಜಿನಿಯರ್ ಉದಯಕುಮಾರ್ ಮಾಹಿತಿ ನೀಡಿದರು.

ಜಲಸಿರಿ ಯೋಜನೆಯಡಿ ನಡೆಸುತ್ತಿರುವ ಕಾಮಗಾರಿಯಿಂದ ತೊಂದರೆಯಾಗಿದೆ. ಈ ಯೋಜನೆ ನಿರ್ವಹಣೆ ಮಾಡುತ್ತಿರುವವರು ಸರಿಪಡಿಸಬೇಕಿದೆ. ಆದಷ್ಟು ಬೇಗ ಮೋಟಾರ್ ಸರಿಪಡಿಸಲಾಗುವುದು. ಆಗ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಆಗದು. ಬಾತಿ ಬಳಿ ನೀರಿನ ಪೈಪ್ ಒಡೆದಿತ್ತು. ಅದೇ ರೀತಿಯಲ್ಲಿ ಬೆಸ್ಕಾಂ ಕಾಮಗಾರಿಗಳು ಎರಡು ದಿನಗಳ ಕಾಲ ನಡೆಯಿತು. ಜಲಸಿರಿ ಯೋಜನೆಯಡಿ ಕೈಗೊಳ್ಳಲಾದ ಕೆಲಸದ ವೇಳೆ ಮೋಟಾರ್ ಹಾಳಾಗಿತ್ತು. ಈ ಮೂರು ಕಾರಣಗಳಿಂದ ಈ ಸಮಸ್ಯೆ ತಲೆದೋರಿದೆ ಎಂದು ಮಾಹಿತಿ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಮಂಜುನಾಥ್ ಅವರು, ಪ್ರತಿಬಾರಿಯೂ ಒಂದಲ್ಲಾ ಒಂದು ರೀತಿಯ ಸಬೂಬು ಹೇಳುತ್ತಾರೆ. ನಗರಕ್ಕೆ ನೀರು ಸರಬರಾಜು ಮಾಡುವುದು ತುಂಬಾನೇ ಮುಖ್ಯ. ಮೋಟಾರ್ ಹಾಳಾಗಿದೆ
ಎಂಬ ಕಾರಣಕ್ಕೆ ಹತ್ತು ದಿನಕ್ಕೊಮ್ಮೆ ನೀರು ಪೂರೈಸಿದರೆ ಜನರು ಬದುಕುವುದಾದರೂ ಹೇಗೆ? ಅಧಿಕಾರಿಗಳು ಇಂಥ ವಿಚಾರ ಬಂದಾಗ ಆದಷ್ಟು ಬೇಗ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು. ಬೇಸಿಗೆ ಬರುತ್ತಿದೆ. ಇದೇ ರೀತಿಯ ಪರಿಸ್ಥಿತಿ
ಮುಂದುವರಿದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭದ್ರಾ ಡ್ಯಾಂನಿಂದ ನೀರು ಬಿಟ್ಟಾಗ ನೀರು ಸಂಗ್ರಹವಾಗುವ ವೇಳೆಯಲ್ಲಿ ಟಿ. ಬಿ. ಸ್ಟೇಷನದ ಹಾಗೂ ಕುಂದವಾಡ ಕೆರೆ ಹೂಳೆತ್ತುವ ಕಾಮಗಾರಿ ನಡೆಸಲಾಯಿತು‌. ಅದು ಅವೈಜ್ಞಾನಿಕವಾಗಿ ಮಾಡಲಾಗಿದೆ. ಈಗ ಒಂದು ಗಂಟೆ ಕಡಿಮೆ ನೀರು ಹರಿಸಲಾಗುತ್ತಿದೆ. ಕೇಳಿದರೆ ನೀರು ಸಂಗ್ರಹವಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ದೂರದೃಷ್ಟಿತ್ವದಿಂದ ಕಾಮಗಾರಿ ಸಮರ್ಪಕವಾಗಿ ಮಾಡಿದ್ದರೆ ಈ ತೊಂದರೆ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ‌.

ಭದ್ರಾ ಜಲಾಶಯದಿಂದ ನೀರು ಹರಿಸುವುದು ತಡವಾಗಲಿದೆ. ಹಾಗಿದ್ರೂ ಕ್ರಮ ಕೈಗೊಂಡಿಲ್ಲ. ಹೂಳೆತ್ತಲು ಕೋಟ್ಯಂತರ ರೂಪಾಯಿ ವ್ಯಯಿಸಲಾಗಿದೆ. ಆದರೂ ನೀರಿನ ಸಮಸ್ಯೆ ಬಗೆಹರಿಸಲು ಆಗಿಲ್ಲ. ಬಿಜೆಪಿ ನೇತೃತ್ವದ ಆಡಳಿತ ವರ್ಗ ಸಮಸ್ಯೆ ನಿವಾರಣೆಗೆ ಮುಂದಾಗಿಲ್ಲ. ಇಚ್ಛಾಶಕ್ತಿಯೂ ಇಲ್ಲ. ಮೋಟಾರ್ ಗಳು ಹಾಳಾಗಿದ್ದರೂ ಆಸಕ್ತಿ ವಹಿಸಿ ಸರಿಪಡಿಸುವ ಕೆಲಸ ಮಾಡಿಲ್ಲ.‌ ನಿತ್ಯವೂ ಜನರು ಪಾಲಿಕೆಗೆ ಹಿಡಿಶಾಪ ಹಾಕುವಂತಾಗಿದೆ. ಕೆಲವೆಡೆಯಂತೂ ಹದಿನೈದು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಸಮುದ್ರಕ್ಕೆ ನೆಂಟಸ್ಥನ ಉಪ್ಪಿಗೆ ಬರ ಎಂಬಂತ ಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜನಹಳ್ಳಿಯಿಂದ ನೀರು ಪೂರೈಸಲಾಗುವುದು ಎನ್ನುತ್ತಾರೆ. ಕುಂದುವಾಡ ಕೆರೆ ಹೂಳೆತ್ತಿದರೂ ಪ್ರಯೋಜನ ಆಗಿಲ್ಲ. ಮೋಟಾರುಗಳು ಹಾಳಾಗಿದ್ದರೂ ಕ್ರಮ ಏಕೆ ತೆಗೆದುಕೊಂಡಿಲ್ಲ. ಏನು ಮಾಡಿದರೂ ನಡೆಯುತ್ತೆ ಎಂಬ ಧಾಟಿಯಲ್ಲಿ ಆಡಳಿತ ವರ್ಗ ವರ್ತಿಸುತ್ತಿರುವುದು ಸರಿಯಲ್ಲ ಎಂದು ಮಂಜುನಾಥ್ ಕಿಡಿಕಾರಿದ್ದಾರೆ‌. ಈ ವೇಳೆ ಮಹಾನಗರ ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್, ಪಾಮೇನಹಳ್ಳಿ ನಾಗರಾಜ್, ಮನು, ಇತರರು ಹಾಜರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *