ದಾವಣಗೆರೆ: ಮುಂಬರುವ ಬೇಸಿಗೆ ತಿಂಗಳುಗಳಲ್ಲಿ ಉಷ್ಙಾಂಶದ ಹೆಚ್ಚಳದಿಂದ ಅಡಿಕೆ ಬೆಳೆಗೆ ನುಸಿ ಕೀಟದ ಭಾದೆ ಹೆಚ್ಚಾಗುವ ಆತಂಕವಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ಬೇತೂರು ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ, ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಹಾಗೂ ಕೃಷಿ ಇಲಾಖೆ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡ ಪ್ರಧಾನ ರೈತರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬೇಸಿಗೆಯಲ್ಲಿ ತೋಟಗಳಲ್ಲಿ ಹಸಿರು ಹೊದಿಕೆ ಇರಬೇಕು. ಹೊಲದಲ್ಲಿ ಭೂಮಿ ಸ್ವಚ್ಚವಿದ್ದರೆ ತೋಟಗಳಲ್ಲಿ ಆತಂರಿಕ ಉಷ್ಣಾಂಶ ಹೆಚ್ಚಾಗುವುದು. ಇದರಿಂದ ರಸ ಹೀರುವ ಕೀಟಗಳ ಭಾದೆ ಹೆಚ್ಚಾಗುವುದು. ಇದರ ನಿಯಂತ್ರಣಕ್ಕೆ ಹೆಕ್ಸಿತೈಯೊಜಾಕ್ಸ್ 1.5 ಮಿಲೀ ಅಥವಾ ಪ್ರೊಪಾರ್ಗೈಟ್ 1.5 ಮಿಲೀ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕೆಂದು ತಿಳಿಸಿದರು.
ಮಣ್ಣಿನ ಗುಣಧರ್ಮಕ್ಕನುಸಾರವಾಗಿ ನೀರಿನ ನಿರ್ವಹಣೆಯನ್ನು ಮಾಡಬೇಕು ಜೊತೆಗೆ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅನುಸರಿಸುವ ಮೂಲಕ ಇಳುವರಿಯ ಸುಸ್ಥಿರತೆಯನ್ನು ಪಡೆಯಬೇಕೆಂದು ತಿಳಿಸಿದರು.
ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಶ್ರೀಧರ ಮೂರ್ತಿ ಮಾತನಾಡಿ ರೈತ ಉತ್ಪಾದಕ ಕಂಪನಿಯಿಂದ ಸಾವಯವ ರಸಾಯನಿಕ ಮುಕ್ತ ಬೆಲ್ಲದ ಉತ್ಪಾದನೆ ಹಾಗೂ ಮಾರುಕಟ್ಟೆಗೆ ಉತ್ತಮ ಬೇಡಿಕೆಯಿದೆ. ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು. ಬೆಳೆಗಳಿಗೆ ಸಮಗ್ರ ಪೋಷಕಾಂಶ ನಿರ್ವಹಣೆ, ಜೈವಿಕ ಗೊಬ್ಬರಗಳ ಬಳಕೆ, ಹಸಿರೆಲೆ ಗೊಬ್ಬರಗಳ ಬಳಕೆ ಮಾಡಬೇಕು ಎಂದು ತಿಳಿಸಿದರು.
ಕಂಪನಿಯ ಅಧ್ಯಕ್ಷ ಉಮೇಶ್ ಮಾತನಾಡಿ ಕಂಪನಿಯವತಿಯಿಂದ ರೈತರಿಗೆ ಗುಣಮಟ್ಟದ ಬೀಜ ಮತ್ತು ರಸಗೊಬ್ಬರಗಳನ್ನು ಪೂರೈಸುತ್ತಿದ್ದು, ರೈತರು ಮಣ್ಣು ಪರೀಕ್ಷೆಯನ್ನು ಮಾಡಿಸಿ ಪೋಷಕಾಂಶಗಳನ್ನು ನೀಡಬೇಕೆಂದು ಕರೆ ನೀಡಿದರು. ಅಡಿಕೆ ಬೆಳೆಯ ರೋಗ ಮತ್ತು ಕೀಟಗಳ ಬಗ್ಗೆ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿಯಾದ ಡಾ. ಅವಿನಾಶ್ ಟಿ.ಜಿ. ರವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ವಿಜಯಕುಮಾರ್, ಅಧಿಕಾರಿ ಆಕಾಶ್, ರೈತರಾದ ಶ್ರೀ ಶಂಕರ್, ಲಿಂಗರಾಜು, ಬಸವರಾಜ, ಸಿದ್ದನಗೌಡರು ಹಾಗೂ 80ಕ್ಕೂ ಹೆಚ್ಚು ರೈತರು ಹಾಜರಿದ್ದರು.



