ದಾವಣಗೆರೆ: ಹೊಂಚು ಹಾಕಿ ಕುಳಿತ ಗ್ಯಾಂಗ್ ನಿಂದ ನಡು ರಸ್ತೆಯಲ್ಲಿಯೇ ಯುವಕ ಭೀಕರ ಕೊಲೆ ನಡೆದಿದೆ. ಗೋಮಾಳ ಜಮೀನು ವಿಚಾರವಾಗಿ ಗಾಂಧಿನಗರ ಠಾಣೆ ವ್ಯಾಪ್ತಿಯ ಚೌಡೇಶ್ವರಿ ನಗರದಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ದಾವಣಗೆರೆ ತಾಲ್ಲೂಕಿನ ಕಿತ್ತೂರು ಗ್ರಾಮದ ನಿವಾಸಿ ಮೈಲಾರಿ (28) ಕೊಲೆಯಾದ ವ್ಯಕ್ತಿ.
ಕಿತ್ತೂರು ಗ್ರಾಮದಲ್ಲಿ 6 ಎಕರೆ ಗೋಮಾಳ ಜಮೀನು ವಿಚಾರವಾಗಿ ಜಗಳವಾಗಿದ್ದು, ಸಂಬಂಧಿಕರು ಜಗಳವಾಡಿದ್ದರು. ಈ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಶಂಕೆ ವ್ಯಕ್ತವಾಗಿದೆ. ಜಮೀನಿನಲ್ಲಿ ನಮ್ಮ ಪಾಲು ಇದೇ ಎಂದು ಸಂಬಂಧಿಗಳು ಇತ್ತೀಚೆಗೆ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆ ವೇಳೆ ಗಲಾಟೆ ಮಾಡಿದ್ದರು.
ಮೈಲಾರಿ, ಕಾರ್ಮಿಕರನ್ನು ಪೂರೈಕೆ ಮಾಡುತ್ತಿದ್ದರು. ಈತನಿಗಾಗಿ ಆರೋಪಿಗಳು ಹಲವು ದಿನದಿಂದ ಕಾಯುತ್ತಿದ್ದರು. ಭಾನುವಾರ ಸಂಜೆ ಚೌಡೇಶ್ವರಿ ನಗರಕ್ಕೆ ಬರುತ್ತಿದ್ದಂತೆಯೇ ಹೊಂಚು ಹಾಕಿ ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದಿದ್ದಾರೆ. ಗಾಯಗೊಂಡ ಮೈಲಾರಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.



