ಡಿವಿಜಿ ಸುದ್ದಿ, ಉಡುಪಿ: ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ನಾಳೆ (ಭಾನುವಾರ) ಮಠಕ್ಕೆ ಶಿಫ್ಟ್ ಮಾಡಲಾಗುವುದು ಎಂದು ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಪೇಜಾವರ ಶ್ರೀಗಳ ಆರೋಗ್ಯ ಕ್ಷೀಣವಾಗುತ್ತಿದ್ದು, ಚೇತರಿಕೆಯಾಗುವ ಯಾವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಶ್ರೀಗಳನ್ನು ನಾಳೆ ಮಠಕ್ಕೆ ಸ್ಥಳಾಂತರ ಮಾಡುತ್ತೇವೆ. ಶ್ರೀಗಳ ಅಂತಿಮ ಆಸೆಯೂ ಅದೇ ಆಗಿತ್ತು. ವೈದ್ಯರನ್ನೊಳಗೊಂಡ ವೆಂಟಿಲೇಟರ್ ವ್ಯವಸ್ಥೆ ಮಠದಲ್ಲೇ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು
ಮಠದಲ್ಲಿ ಮುಂದಿನ ತಯಾರಿ ನೋಡಿಕೊಂಡು ಮುಂದಿನ ಕ್ರಮ ಮಾಡುತ್ತೇವೆ. ಪೇಜಾವರ ಮಠಕ್ಕೆ ಭಕ್ತರ ಭೇಟಿ ಸದ್ಯ ಬೇಡ. ಎಲ್ಲರೂ ಇದ್ದಲ್ಲಿಂದ ಗುರುಗಳ ಆರೋಗ್ಯಕ್ಕಾಗಿ ಪ್ರಾರ್ಥಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪೂರ್ಣ ಸಹಕಾರ ಸಿಗುವ ವಿಶ್ವಾಸವಿದೆ ಎಂದರು.
ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಕಳೆದ ರಾತ್ರಿ ಎಂಆರ್ಐ ಸ್ಕ್ಯಾನ್ಗೆ ಒಳಪಡಿಸಲಾಗಿದೆ. ಕಳೆದ ಒಂಬತ್ತು ದಿನಗಳಿಂದ ಬೆಂಗಳೂರಿನಿಂದ ಆಗಮಿಸಿರುವ ಇಬ್ಬರು ತಜ್ಞ ವೈದ್ಯರು ಮತ್ತು ಕೆಎಂಸಿಯ ಏಳು ವೈದ್ಯರ ತಂಡ ಪೇಜಾವರಶ್ರೀಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.



