ದಾವಣಗೆರೆ: ಆಟೋದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ 3.5 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಗೆ ನೆರವಾದ ಆಟೋ ಚಾಲಕನಿಗೆ ಪೊಲೀಸರು ಸನ್ಮಾನ ಮಾಡಿದ್ದಾರೆ.
ರಾಮಕೃಷ್ಣ ಹೆಗಡೆ ನಗರದ ಆಟೋ ಚಾಲಕ ಸುಭಾನ್ ಖಲೀಲ್ ಸಾಬ್ , 3.5 ಲಕ್ಷ ಮೌಲ್ಯದ ಬಂಗಾರದ ಆಭರಣವಿದ್ದ ವ್ಯಾನಿಟಿ ಬ್ಯಾಗ್ ಹುಡುಕಲು ಪೊಲೀಸರಿಗೆ ಸಹಕಾರ ನೀಡಿದ್ದಾರೆ. ಚಿತ್ರದುರ್ಗದ ಹಿಮ್ಮತ್ ನಗರದ ಅಶ್ಮತ್ ಉನ್ನೀಸಾ ದಾವಣಗೆರೆಯ ಸುಲ್ತಾನ್ ಪ್ಯಾಲೇಸ್ ಕಲ್ಯಾಣ ಮಂದಿರದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಬಂದಿದ್ದರು.
ಆಟೋದಿಂದ ಇಳಿಯುವಾಗ 3.5 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ವ್ಯಾನಿಟಿ ಬ್ಯಾಗ್ ಮರೆತು ಹೋಗಿದ್ದರು. ಆಟೋ ಚಾಲಕ ಸುಭಾನ್ ಸಾಬ್ ಆಟೋದಲ್ಲಿ ಪ್ರಯಾಣಿಸಿದ ಎಲ್ಲ ಪ್ರಯಾಣಿಕರನ್ನು ಹುಡುಕಿಕೊಂಡು ಹೋಗಿ ಬ್ಯಾಗ್ ಪತ್ತೆಗೆ ನೆರವಾಗಿದ್ದಾರೆ. ಚಾಲಕನಿಗೆ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಪಿಎಸ್ಐ ತಿಪ್ಪೇಸ್ವಾಮಿ ಸನ್ಮಾನಿಸಿದ್ದಾರೆ. ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಪ್ರಶಂಸಿಸಿದ್ದಾರೆ.



