ಬೆಂಗಳೂರು: ಮಾಂಡೌಸ್ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಚಳಿ ಗಾಳಿ ಸಹಿತ ಅಕಾಲಿಕ ಮಳೆಯಾಗುತ್ತಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಡಿ. 16ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಮಾಹಿತಿ ನೀಡಿದೆ.
ಮಾಂಡೌಸ್ ಚಂಡಮಾರುತ ದುರ್ಬಲವಾಗಿದ್ದರೂ ಚಾಮರಾಜನಗರ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ IMD ಹಳದಿ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು,ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಉತ್ತರ ಕರ್ನಾಟಕದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಹಾವೇರಿ, ಗದಗ ಮತ್ತು ಬಳ್ಳಾರಿಯಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.
ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಚಾಮರಾಜನಗರದಲ್ಲಿ 69 ಮಿಲಿ ಮೀಟರ್, ಶಿವಮೊಗ್ಗದಲ್ಲಿ 57.5 ಮಿಲಿ ಮೀಟರ್, ಚಿಕ್ಕಮಗಳೂರಿನಲ್ಲಿ 53 ಮಿಲಿ ಮೀಟರ್, ತುಮಕೂರು- 48.5 ಮಿಲಿ ಮೀಟರ್, ಮಂಡ್ಯ – 46 ಮಿಲಿ ಮೀಟರ್, ಮೈಸೂರು- 44.5 ಮಿಲಿ ಮೀಟರ್, ದಾವಣಗೆರೆ- 42.5 ಮಿಲಿ ಮೀಟರ್, ಹಾಸನ- 39ಮಿಲಿ ಮೀಟರ್, ಕೋಲಾರ- 33 ಮಿಲಿ ಮೀಟರ್, ಬಳ್ಳಾರಿ- 31 ಮಿಲಿ ಮೀಟರ್ ಹಾಗೂ ಬೆಂಗಳೂರು ನಗರದಲ್ಲಿ 31 ಮಿಲಿ ಮೀಟರ್ ಮಳೆ ಆಗಿದೆ.



