ಚನ್ನಗಿರಿ; ವಿಭಿನ್ನ ಸಾಹಿತ್ಯ,ಸಂಗೀತ ,ಕಲೆ, ಸಂಸ್ಕೃತಿಗಳ ತಪೋಭೂಮಿಯಾಗಿರುವ ಕರ್ನಾಟಕ ರಾಜ್ಯವು ಜಾಗತಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮೆರೆಯುತ್ತಿದೆ ಎಂದು ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಬಣ್ಣಿಸಿದರು.
ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣದ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯುವ ಸೌರಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ ಕರ್ನಾಟಕವು ಕರ್ಮಭೂಮಿ ಹಾಗೂ ಧರ್ಮಭೂಮಿಯಾಗಿದ್ದು ,ಇಲ್ಲಿನ ಮಣ್ಣಿನ ಪ್ರತಿ ಕಣ ಕಣಗಳೂ ಸಂಗೀತ ಕಲೆ ಸಾಹಿತ್ಯ ಸಂಸ್ಕೃತಿಗಳ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ ಎಂದರು.
ಇಂದಿನ ಕಾಲಘಟ್ಟದಲ್ಲಿ ಟಿವಿ ಮತ್ತು ಮೊಬೈಲ್ನ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಯುವಕ ಯುವತಿಯರಲ್ಲಿ ಸಾಹಿತ್ಯದ ಅಭಿರುಚಿ ಕಡಿಮೆಯಾಗಿ ಕಲಾಸಕ್ತಿಯು ಶೂನ್ಯದೆಡೆಗೆ ಸಾಗಿ ಸಾಂಸ್ಕೃತಿಕ ಅರಾಜಕತೆ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ಇಂತಹ ದುರಿತ ಕಾಲದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಯುವ ಸೌರಭ,ಸಾಂಸ್ಕೃತಿಕ ಸೌರಭ ಮತ್ತು ಚಿಗುರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಶಿಸಿ ಹೋಗುತ್ತಿರುವ ಗ್ರಾಮೀಣ ಕಲೆಗಳನ್ನು ಪೋಷಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ ಸೈಯದ್ ರಫೀಕ್ ವಹಿಸಿಕೊಂಡು ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಟ್ಟುವಲ್ಲಿ ಶ್ರಮಿಸುತ್ತಿದ್ದು ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಂಗ ಕಲಾವಿದ ಎಸ್.ಎನ್.ರಂಗಸ್ವಾಮಿ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಡಿ.ಆರ್.ಹಾಲೇಶ್, ಹೆಚ್.ಹೊನ್ನಪ್ಪ,ವೈ ಹಾಲೇಶಪ್ಪ, ಎ.ತೀರ್ಥಪ್ಪ, ಕರಿಯಮ್ಮ, ಗ್ರಾ.ಪಂ.ಸದಸ್ಯರಾದ ರಮೇಶ್, ಅತಾವುಲ್ಲಾ ,ಶೋಭ ಮಂಜುನಾಥ್,ಕಾಲೇಜಿನ ಪ್ರಾಂಶುಪಾಲ ಎಂ.ಡಿ.ರಾಘವೇಂದ್ರ, ಉಪನ್ಯಾಸಕರಾದ ರವಿಕುಮಾರ್, ಯೋಗೇಶ್, ರಾಜಪ್ಪ, ಗೋವಿಂದರೆಡ್ಡಿ , ಮರಿಸ್ವಾಮಿ ಇದ್ದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಯುವ ಕಲಾವಿದರಿಂದ ಡೊಳ್ಳು ಕುಣಿತ, ಪುರವಂತಿಕೆ, ಬಯಲಾಟ, ಸುಗಮ ಸಂಗೀತ, ಜಾನಪದ ಗೀತೆಗಳು, ಸಮೂಹ ನೃತ್ಯಗಳು ಹಾಗೂ ಲಂಬಾಣಿ ನೃತ್ಯಗಳು ನೋಡುಗರ ಮನಸೂರೆಗೊಂಡವು .



