ದಾವಣಗೆರೆ: ನಗರದ ವಿವಿಧ ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಿದ ಸಂಸದ ಜಿ.ಎಂ ಸಿದ್ದೇಶ್ವರ ಅವರು, ಮೂಲ ಸೌಕರ್ಯ ಪರಿಶೀಲನೆ ನಡೆಸಿ, ಸ್ಥಳೀಯ ವಾಸಿಗಳ ಕುಂದುಕೊರತೆಗಳನ್ನು ಆಲಿಸಿದರು.
ದಾವಣಗೆರೆ ನಗರದ ಭಾರತ್ ಕಾಲೋನಿಯ 7 ನೇ ಕ್ರಾಸ್, ಅಣ್ಣಾನಗರ, ಕಬ್ಬೂರ ಬಸಪ್ಪ ನಗರದಲ್ಲಿರುವ ಉದ್ಯಾನವನ, ಒಳಚರಂಡಿ, ಕುಡಿಯುವ ನೀರಿನ ಸೌಕರ್ಯಗಳನ್ನು ವೀಕ್ಷಿಸಿ ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.ಹೆಚ್ ಕೆ.ಆರ್. ನಗರದಲ್ಲಿ ನಿರ್ಮಾಣಮಾಡುತ್ತಿರುವ 972 ಮನೆಗಳ ಕಾಮಗಾರಿಗಳ ಪ್ರಗತಿಯನ್ನು ವೀಕ್ಷಣೆಮಾಡಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತ ಕಾಮಗಾರಿಗೆ ಸೂಚನೆ ನೀಡಿದರು.
ಶುದ್ಧ ನೀರಿಗೆ ಮನವಿ: ಬಡಾವಣೆಗಳಲ್ಲಿ ಸಂಚಾರದ ಸಂದರ್ಭದಲ್ಲಿ ಸ್ಥಳೀಯ ವಾಸಿಗಳು ಕುಡಿಯುವ ನೀರಿನ ಅಶುದ್ಧತೆ ಕುರಿತಂತೆ ಸಂಸದ ಗಮನಸೆಳೆದರು. ಪೈಪ್ಲೈನ್ ದುರಸ್ತಿಯಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುವುದಿಲ್ಲ. ಪೂರೈಕೆಯಾಗುತ್ತಿರುವ ನೀರು ಕಲುಷಿತದಿಂದ ಆರೋಗ್ಯದಮೇಲೆ ತೀವ್ರ ತೊಂದರಯಾಗುತ್ತಿದ್ದು, ತ್ವರಿತವಾಗಿ ದುರಸ್ತಿಗೊಳಿಸಿ ಸ್ಥಳೀಯರಿಗೆ ಶುದ್ಧ ಕುಡಿಯುವ ನೀರು ಪೂರೈಸುವಂತೆ ಕ್ರಮವಹಿಸುವಂತೆ ಮನವಿ ಮಾಡಿಕೊಂಡರು.
ಸ್ಥಳದಲ್ಲೇ ಅಧಿಕಾರಿಗಳಿಗೆ ತಾಕೀತು ಮಾಡಿದ ಸಂಸದರು, ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ಪೈಪ್ಲೈನ್ಗಳನ್ನು ದುರಸ್ತಿಗೊಳಿಸಬೇಕು. ಸಂಸದರ ಅನುದಾನದಲ್ಲಿ ಕೊರೆಸಲಾದ ಬೋರವೆಲ್ಗಳನ್ನು ಪುನಶ್ಚೇತನಗೊಳಿಸಿ ನಿವಾಸಿಗಳಿಗೆ ನೀರು ಪೂರೈಕೆಗೆ ಕ್ರಮವಹಿಸುವಂತೆ ಸೂಚನೆ ನೀಡಿದರು.
ಗುತ್ತಿಗೆದಾರರು ಸ್ಲಂಬೋರ್ಡ್ ಮನೆಗಳಿಗೆ ಮೀಟರ್ ಅಳವಡಿಸಲು ಹಾಗೂ ಹೆಚ್ಚುವರಿ ಉಪಕರಣ ಅಳವಡಿಸಲು ಸರ್ಕಾರದಿಂದ ಫಲಾನುಭವಿಗಳಿಗೆ ಬಿಡುಗಡೆಯಾದ ಅನುದಾನದ ಬಿಲ್ ವಿಳಂಬ ಮಾಡುತ್ತಿರುವ ಬಗ್ಗೆ ಸಂಸದರಿಗೆ ದೂರು ಸಲ್ಲಿಸಿದರು. ಸಾರ್ವಜನಿಕ ದೂರು ಆಲಿಸಿದ ಸಂಸದರು, ನಿರ್ಧಿಷ್ಟವಾದ ದೂರುಗಳಿದ್ದಲ್ಲಿ ಲಿಖಿತವಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರೆ ಈ ಕುರಿತಂತೆ ಪ್ರತ್ಯೇಕ ಸಭೆ ನಡೆಸಿ ಲೋಪಗಳನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಇಂಜನೀಯರ್ ಹಾಗೂ ಗುತ್ತಿಗೆದಾರರಿಗೆ ತೀವ್ರ ತರಾಟೆತೆಗೆದುಕೊಂಡ ಸಂಸದರು ಸಾರ್ವಜನಿಕರಿಂದ ಯಾವುದೇ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ. ಪ್ಲಾನ್ ಅನುಗುಣವಾಗಿ ಮನೆಗಳನ್ನು ನಿರ್ಮಾಣ ಮಾಡಬೇಕು. ಬಡವರಿಗೆ ಯಾವುದೇ ರೀತಿಯಿಂದ ತೊಂದರೆಯಾಗಬಾರದು, ಅನ್ಯಾಯವಾಗಬಾರದು ಎಂದು ಅಭಿಯಂತರರಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ, ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ ಮುದ್ದಜ್ಜಿ, ದೂಡಾ ಮಾಜಿ ಅಧ್ಯಕ್ಷ ಯಶವಂತ್ ರಾವ್ ಜಾಧವ್, ಮಾಜಿ ಮಹಾಪೌರ ಎಸ್.ಟಿ.ವೀರೇಶ, ಪಾಲಿಕೆ ಸದಸ್ಯರಾದ ಮೀನಾಕ್ಷಿ ಜಗದೀಶ, ಸ್ಮಾರ್ಟ್ ಸಿಟಿ ಇಂಜಿನಿಯರ್ ಮಂಜುನಾಥ್ ಇತರ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.



