ದಾವಣಗೆರೆ: 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ಕನ್ನಡಿಗರ ಪ್ರತಿ ಮನೆಗಳ ಮೇಲೆ ಕನ್ನಡ ಬಾವುಟ ( ಕೆಂಪು ಹಳದಿಯ ) ಹಾರಿಸಬೇಕೆಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಮನವಿ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಕನ್ನಡಿಗರು ಕನ್ನಡ ಭಾಷಾ ಪ್ರೇಮಿಗಳಾಗಿದ್ದಾರೆ. 67 ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮ, ಸಡಗರಗಳಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರತೀ ಕನ್ನಡಿಗರ ಮನೆ ಮೇಲೆ ಕನ್ನಡ ಬಾವುಟ ಹಾರಾಡಿಸುವುದರಿಂದ ಕರ್ನಾಟಕ ರಾಜ್ಯೋತ್ಸವದ ಮೆರಗು ಪ್ರತೀ ಮನೆ ಮನೆಯಲ್ಲೂ ಸಂಭ್ರಮಿಸುತ್ತದೆ. ಆದ್ದರಿಂದ ಸರ್ವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಈ ವಿಶೇಷ ಮನವಿಯನ್ನು ಮನ್ನಿಸಿ ಕನ್ನಡಿಗರು ಮಂಗಳವಾರ ಬೆಳಗ್ಗೆ ತಮ್ಮ ತಮ್ಮ ಮನೆಗಳ ಮೇಲೆ ಹಳದಿ ಕೆಂಪು ವರ್ಣದ ಕನ್ನಡ ಧ್ವಜವನ್ನು ಹಾರಿಸುವುದರ ಮೂಲಕ ನಾಡು ನುಡಿ ಪ್ರೇಮವನ್ನು ಪ್ರದರ್ಶಿಸಬೇಕು ಹಾಗೂ ತಮ್ಮ ಮನೆಗಳ ಮೇಲೆ ಹಾರಿಸಿದ ಕನ್ನಡ ಧ್ವಜದ ಚಿತ್ರವನ್ನು ಜಿಲ್ಲಾಧ್ಯಕ್ಷರ ವಾಟ್ಸಾಪ್ ಸಂಖ್ಯೆ 9448812704 ಅಥವಾ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಅವರ ವಾಟ್ಸಾಪ್ ಸಂಖ್ಯೆ 9844314543
ಗೆ ಕಳುಹಿಸಿಕೊಡಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹಾಗೂ ಪ್ರತಿ ಗ್ರಾಮಗಳಲ್ಲಿ ಧ್ವಜ ಸ್ತಂಭಗಳನ್ನು ನಿರ್ಮಿಸಿ ವರ್ಷವಿಡೀ ಕನ್ನಡದ ಬಾವುಟ ಹಾರಾಡುವಂತೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರುಗಳು ಮತ್ತು ಅಧಿಕಾರಿಗಳಲ್ಲಿ ಕಸಾಪ ಜಿಲ್ಲಾಧ್ಯಕ್ಷರು ಮನವಿ ಮಾಡಿದ್ದಾರೆ.
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನವಂಬರ್ ಒಂದರಿಂದ ಐದನೇ ತಾರೀಕಿನವರೆಗೆ ಐದು ದಿನಗಳ ಕಾಲ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿರುವ ವೈಶಿಷ್ಟ್ಯಪೂರ್ಣ ಕನ್ನಡ ನುಡಿ ಹಬ್ಬದ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಕನ್ನಡಿಗರು, ಕನ್ನಡ ಪ್ರೇಮಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರುಗಳು ಭಾಗವಹಿಸಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ. ವಾಮದೇವಪ್ಪ ಕರೆ ನೀಡಿದ್ದಾರೆ.



