ದಾವಣಗೆರೆ: ವಿವಿಧ ಸಾಮಾಜಿಕ ಜಾಲತಾಣದ ಮೂಲಕ ರಾಜಕೀಯ ಪಕ್ಷದ ನಾಯಕರಿಗೆ ಅವಾಚ್ಯ, ಅಶ್ಲೀಲ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ ಕೃತ್ಯಕ್ಕೆ ಬಳಸಿದ್ದ 05 ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಜಿಮೇಲ್, ಫೇಸ್ ಬುಕ್ ನಲ್ಲಿ ಚನ್ನಗಿರಿ ರಾಜಕೀಯ, ಗಿಲ್ಟಿ ಶಿವ ಚನ್ನಗಿರಿ ಪ್ರಚಂಡ, ಮಸಣಿಕೆರೆ ಚೌಡಮ್ಮ ಚನ್ನಗಿರಿ ರಾಯಲ್ ಬ್ರದರ್ ಎಂಬ ಖಾತೆಗಳನ್ನು ತೆರೆದು ರಾಜಕೀಯ ಪಕ್ಷದ ಕಾರ್ಯಕರ್ತರಿಗೆ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಈ ಬಗ್ಗೆ ಚನ್ನಗಿರಿ ಪೊಲೀಸ್ ಋ.ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಡಿವೈಎಸ್ ಪಿ ಸಂತೋಷ್ ಕೆ.ಎಂ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಗಳಾದ ಮಧು ಹಾಗೂ ಸೈಬರ್ ಕ್ರೈಂನ ಮಂಜುನಾಥ್ ನೇತೃತ್ವದಲ್ಲಿ ಆಧುನಿಕ ತಂತ್ರಜ್ಞಾನ ಬಳಿಸಿ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಜಿಮೇಲ್ ಹಾಗೂ ಫೇಸ್ ಬುಕ್ ಕಂಪನಿಗಳಿಂದ ಮಾಹಿತಿ ಪಡೆದು ಆರೋಪಿಗಳಾದ ಚನ್ನಗಿರಿ ತಾಲ್ಲೂಕಿನ ಕುಳೆನೂರು ಕೌಶಿಕ್ ಗೌಡ, ಶೆಟ್ಟಿಹಳ್ಳಿಯ ನಾರದಮುನಿ, ಅಜ್ಜಿಹಳ್ಳಿಯ ಶ್ರೀಕಾಂತ್ ಬಂಧಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುವರ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಇಂತಹ ಕೃತ್ಯದಲ್ಲಿ ತೊಡಗಿದ್ದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ ಪಿ ರಿಷ್ಯಂತ್ ಎಚ್ಚರಿಕೆ ನೀಡಿದ್ದಾರೆ.



