ದಾವಣಗೆರೆ: ಗ್ರಾಹಕರ ಹೆಸರಲ್ಲಿ ಸಾಲ ಸೃಷ್ಟಿಸಿ, ಅವರ ಖಾತೆಯಿಂದ ಹಣ ಕಡಿತ ಮಾಡಿಕೊಳ್ಳುತ್ತಿದ್ದ ಎಲೆಕ್ಟ್ರಾನಿಕ್ಸ್ ಶಾಪ್ ಮತ್ತು ಬಜಾಜ್ ಫೈನಾನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ.
ಹರಿಹರ ನಗರದ ಕೆ.ಜಿ.ಮುನೀಂದ್ರ ಮತ್ತು ಎಂ.ಕೆ. ಸ್ವಾಮಿ ಅವರು 2016ರ ಅಕ್ಟೋಬರ್ನಲ್ಲಿ ಇಲ್ಲಿನ ಅಶ್ವಿನಿ ಎಲೆಕ್ಟ್ರಾನಿಕ್ಸ್ನಲ್ಲಿ ಟಿವಿ ಖರೀದಿಸಲು ಹೋದಾಗ ಬಜಾಜ್ ಫೈನಾನ್ಸ್ನಿಂದ ಶೂನ್ಯ ಬಡ್ಡಿ ದರದ ಸಾಲದ ಬಗ್ಗೆ ಮಾಹಿತಿ ನೀಡಿತ್ತು. ಈ ಬಗ್ಗೆ ಇಬ್ಬರು ಪ್ರತ್ಯೇಕ ಅರ್ಜಿ ಸಲ್ಲಿಸಿದರು. ಸ್ವಲ್ಪ ದಿನದ ನಂತರ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇರುವುದರಿಂದ ನಿಮಗೆ ಸಾಲ ಮಂಜೂರಾಗಿಲ್ಲಎಂದು ತಿಳಿಸಿದ್ದರು. ಆಗ ಇಬ್ಬರೂ ಹಣ ಪಾವತಿಸಿ ಟಿವಿ ಖರೀದಿ ಮಾಡಿದ್ದರು.
2017ರ ಮಾರ್ಚ್ ನಲ್ಲಿ ಮುನೀಂದ್ರ ಅವರ ಬ್ಯಾಂಕ್ ಖಾತೆಯಿಂದ 5,506 ಮತ್ತು ಎಂ.ಕೆ.ಸ್ವಾಮಿ ಖಾತೆಯಿಂದ 5481 ಮಾಸಿಕ ಕಂತುಗಳು ಕಡಿತವಾಗಿತ್ತು. ಈ ಬಗ್ಗೆ ಬಜಾಜ್ ಫೈನಾನ್ಸ್ ಕಚೇರಿಯಲ್ಲಿ ವಿಚಾರಿಸಿದಾಗ, ಖಾತೆ ಸಂಖ್ಯೆ ವ್ಯತ್ಯಾಸವಾಗಿ, ತಪ್ಪಾಗಿ ನಿಮ್ಮ ಖಾತೆಯ ಹಣ ಕಡಿತವಾಗಿದೆ. ಕಡಿತಗೊಂಡ ಹಣವನ್ನು ಪೂರ್ತಿ ವಾಪಸ್ ಹಾಕುತ್ತೇವೆ ಎಂದಿದ್ದರು. ಹಣ ಬರದಿದ್ದಾಗ ಮತ್ತೊಮ್ಮೆ ವಿಚಾರಿಸಿದ್ದಾಗ, ನಿಮ್ಮ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು, 65,500 ನಕಲಿ ಸಾಲ ಸೃಷ್ಟಿಸಿ ಹಣ ಜಮೆ ಮಾಡುತ್ತಿರುವುದು ಗೊತ್ತಾಗಿದೆ.
ಈ ಬಗ್ಗೆ ಸೆ.5, 2020ರಂದು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಪರಿಹಾರ ಕೋರಿ ಇವರಿಬ್ಬರೂ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಮೀನಾ ಎಚ್.ಎನ್, ಮುನಿಂದ್ರಾಗೆ 24,590, ಎಂ.ಕೆ.ಸ್ವಾಮಿಯವರ 8,714ಗಳನ್ನು ಶೇ 9ರ ಬಡ್ಡಿ ಸಮೇತ 30 ದಿನದೊಳಗೆ ಹಿಂತಿರುಗಿಸಲು ಆದೇಶ ನೀಡಿದೆ.



