ಡಿವಿಜಿ ಸುದ್ದಿ, ದಾವಣಗೆರೆ: ಪ್ರಧಾನಿ ಹುದ್ದೆ ತ್ಯಾಗ ಮಾಡಿದ ಸೋನಿಯಾ ಗಾಂಧಿ ೨೦೦೪ ಮತ್ತು ೨೦೦೯ ರಲ್ಲಿ ಯುಪಿಎ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಿದ ದೇಶದ ಹೆಮ್ಮೆಯ ಮಹಿಳೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಹೇಳಿದರು.
ನಗರದ ವನಿತಾ ಸಮಾಜದ ಆನಂದಧಾಮದಲ್ಲಿ ಸೋನಿಯಾ ಗಾಂಧಿ ಹುಟ್ಟು ಹಬ್ಬವನ್ನು ಹಿರಿಯರಿಗೆ ಸಿಹಿ ವಿತರಿಸಿದ ನಂತರ ಮಾತನಾಡಿದ ಅವರು,೨೦೦೪ ರಲ್ಲಿ ಪ್ರಧಾನಿ ಆಗುವ ಅವಕಾಶವಿದ್ದರೂ, ಸೋನಿಯಾ ಗಾಂಧಿ ಮನ್ ಮೋಹನ್ ಸಿಂಗ್ ಅವರಿಗೆ ಹುದ್ದೆಯನ್ನು ತ್ಯಾಗ ಮಾಡಿದರು. ಯುಪಿಎ ಅಧ್ಯಕ್ಷೆಯಾಗಿ ಸತತ ಎರಡು ಸಲ ಯುಪಿಎ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು ಎಂದು ತಿಳಿಸಿದರು.

ಸೋನಿಯಾ ಗಾಂಧಿ ಮಾರ್ಗದರ್ಶನದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಆಹಾರ ಭದ್ರತೆ ಕಾಯ್ದೆ, ಮಾಹಿತಿ ಕಾಯ್ದೆ ಸೇರಿದಂತೆ ಅನೇಕ ಜನಪರ ಯೋಜಜನೆಗಳನ್ನು ಜಾರಿಗೆ ತರಲು ಸೋನಿಯಾ ಗಾಂಧಿ ಅವರು ದೂರ ದೃಷ್ಟಿಯೇ ಕಾರಣ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಗಾಂಧಿ ಕುಟುಂಬಕ್ಕೆ ಎಸ್ ಪಿಜಿ ಭದ್ರತೆ ಹಿಂಪಡೆಯುವ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದೆ. ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಗಾಂಧಿ ಕುಟುಂಬಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದರು.
ಹಣ ಬಲದ ಮೇಲೆ ಬಿಜೆಪಿ ಜಯ
ರಾಜ್ಯದಲ್ಲಿ ಭೀಕರ ಅತಿವೃಷ್ಟಿ ಉಂಟಾಗಿ ಜನ ತತ್ತರಿಸಿ ಹೋಗಿದ್ದರೂ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಧಿಕಾರ ಭದ್ರ ಪಡಿಸಿಕೊಳ್ಳುವಲ್ಲಿ ತಲ್ಲಿನರಾಗಿದ್ದರು. ೧೭ ಶಾಸಕರನ್ನು ರಾಜೀನಾಮೆ ಕೊಡಿಸಿ, ಹಣದ ಮೇಲೆ ಚುನಾವಣೆ ನಡೆಸಿ ಗೆಲುವು ಸಾಧಿಸಿದ್ದಾರೆ. ಯಡಿಯೂರಪ್ಪ ಅವರಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹಣದ ಮೂಲಕವೇ ಎಲ್ಲಾ ಸಾಧಿಸಬಹುದು ಎಂದುಕೊಂಡಿದ್ದಾರೆ. ಈಗ ಗೆದ್ದವರಿಗೆ ಮಂತ್ರಿ ಕೊಡಲು ಅವರಲ್ಲಿಯೇ ಬಂಡಾಯ ಎದ್ದೇಳಲಿದೆ ಎಂದರು.



