ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯು ದಿವಾಳಿಯಾಗಿದ್ದು, ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ ಎಂದು ಎಂದು ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಗಡಿಗುಡಾಳ್ ಜಿ. ಎಸ್. ಮಂಜುನಾಥ್ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಜಿಡಿ, ತುರ್ತು ಕಾಮಗಾರಿ ಸೇರಿದಂತೆ ಯಾವುದಕ್ಕೂ ಹಣ ಮೀಸಲಿಟ್ಟಿಲ್ಲ. ಮೇಯರ್ ಜಯಮ್ಮ ಗೋಪಿನಾಯ್ಕ್ ಅವಧಿ ನಾಲ್ಕು ತಿಂಗಳು ಪೂರ್ಣಗೊಂಡಿದ್ದರೂ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ. ಇದು ಅತ್ಯಂತ ಕೆಟ್ಟ ಆಡಳಿತ ಎಂದರು.
ಹಿಂದಿನ ಮೇಯರ್ ಅವಧಿಯಲ್ಲಿ ಯಾವ ಮುಂದಾಲೋಚನೆ ಇಲ್ಲದೇ ಬಜೆಟ್ ಮಂಡಿಸಿ, ಸುಮಾರು 30 ಕೋಟಿ ರೂಪಾಯಿ ಮುಂಗಡ ಮಾಡಿದ್ದರು. ಬಿಜೆಪಿ ಸದಸ್ಯರು ಪ್ರತಿನಿಧಿಸುವ ವಾರ್ಡ್ ಗಳಿಗೆ 2ರಿಂದ 3 ಕೋಟಿ ರೂಪಾಯಿ ವೆಚ್ಚದಲ್ಲಿ ಸಾಮಾನ್ಯ ನಿಧಿಯಲ್ಲಿ ನೀಡಿದ್ದರು. ಕಾಂಗ್ರೆಸ್ ನ ಪಾಲಿಕೆ ಸದಸ್ಯರಿಗೆ ನೀಡಿಲ್ಲ. ಈ ತಾರತಮ್ಯ ಯಾಕೆ ಎಂದು ಪ್ರಶ್ನಿಸಿದರು.
ಮೇಯರ್ ಜಯಮ್ಮ ಗೋಪಿನಾಯ್ಕ್ ಪ್ರತಿನಿಧಿಸುವ ವಾರ್ಡ್ ಗೆ ಒಂದೂವರೆ ಕೋಟಿ ರೂಪಾಯಿ ಅನುದಾನ ಹಾಕಿಕೊಂಡಿದ್ದಾರೆ. ನಾವು ಕೇಳಿದರೆ ಅನುದಾನ ಇಲ್ಲ ಎನ್ನುವ ಮೇಯರ್ ಅವರ ವಾರ್ಡ್ ಗೆ ಎಲ್ಲಿಂದ ಬಂತು..? ಕಳೆದ 2020-21, 2021-22 ನೇ ಅವಧಿಯಲ್ಲಿ ಒಟ್ಟು 55 ಕೋಟಿ ರೂಪಾಯಿ ಟೆಂಡರ್ ಕರೆದಿದ್ದು, ಈ ಸಾಲಿನಲ್ಲಿ 20 ಕೋಟಿ ರೂಪಾಯಿ ಕೊರತೆ ಆಗಿದೆ. ಪ್ರಸಕ್ತ ಸಾಲಿನಲ್ಲಿ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪಾಲಿಕೆ ಸಾಮಾನ್ಯ ನಿಧಿಯಲ್ಲಿ ಅನುದಾನ ಲಭ್ಯವಿಲ್ಲ ಎಂಬ ಸಿದ್ಧ ಉತ್ತರನೀಡುತ್ತಿದೆ ಎಂದರು.
ಜೆಸಿಬಿ ಯಂತ್ರಗಳಿಗೆ ಡೀಸೆಲ್ ಹಾಕಿಸಲು ಹಣವಿಲ್ಲ ಎಂದು ಅಧಿಕಾರಿಯೊಬ್ಬರೇ ನನ್ನ ಬಳಿ ಹೇಳಿದ್ದಾರೆ. ಪಾಲಿಕೆ ದಿವಾಳಿ ಆಗಿರುವುದಕ್ಕೆ ಇದಕ್ಕಿಂತ ಸಾಕ್ಷಿಗಳು ಬೇಕಾ..? ಸ್ವಚ್ಚತಾ ಕಾರ್ಯಕ್ಕೆ ಪಾಲಿಕೆಗೆ ಸಾಕಷ್ಟು ಹೊಸ ವಾಹನಗಳು ಬಂದಿವೆ. ಇವು ತುಕ್ಕು ಹಿಡಿಯುವ ಹಂತದಲ್ಲಿದ್ದು, ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಇದಕ್ಕೆ ಯಾರು ಜವಾಬ್ದಾರಿ. ಪಾಲಿಕೆ ವ್ಯಾಪ್ತಿಯ ಸ್ವಿಮ್ಮಿಂಗ್ ಫೂಲ್ ಕಳೆದ ಮೂರು ವರ್ಷಗಳಿಂದ ನಿಂತಿದೆ. ಇದರಿಂದ ಈಜುಪಟುಗಳಿಗೆ ತೊಂದರೆ ಆಗಿದೆ. ಕೂಡಲೇ ಸರಿಪಡಿಸಬೇಕು. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿಯಾಗಿದೆ. ಹಿತರಕ್ಷಣಾ ಸಮಿತಿಯ ಸದಸ್ಯರು ಒತ್ತಾಯಿಸಿದ್ದರೂ ದಪ್ಪ ಚರ್ಮದ ಆಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು ಪಾಲಿಕೆಗೆ ಯಾವುದೇ ಅನುದಾನ ನೀಡಿಲ್ಲ. ಪಾಲಿಕೆ ಸದಸ್ಯರ ಸಭೆ ನಡೆಸಿ ಅಭಿವೃದ್ಧಿ ಬಗ್ಗೆ ಚರ್ಚಿಸಿ ಎಂಬ ಮನವಿ ಮಾಡಿದ್ದರೂ ಮನವಿಗೆ ಸ್ಪಂದಿಸಿಲ್ಲ. ಸಂಸದ ಜಿ. ಎಂ. ಸಿದ್ದೇಶ್ವರ್, ಶಾಸಕ ರವೀಂದ್ರನಾಥ್, ಪಾಲಿಕೆಯ ಬಿಜೆಪಿ ಸದಸ್ಯರು ಅನುದಾನ ತರುವುದರಲ್ಲಿ ವಿಫಲರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕಾಟಾಚಾರಕ್ಕೆ ಸಭೆ ನಡೆಸಿ ಹೋದರೆ ಅಭಿವೃದ್ಧಿ ಕಾಣಲು ಸಾಧ್ಯವೇ ಎಂದು ಪ್ರಶ್ನಿಸಿದರು.



