ದಾವಣಗೆರೆ: ದಾವಣಗೆರೆಯಲ್ಲಿ ಇದೇ ಮೊದಲ ಬಾರಿಗೆ ಜು.1ರಂದು ಪುರಿ ಶ್ರೀ ಜಗನ್ನಾಥ ರಥಯಾತ್ರೆ ಮಹಾ ಮಹೋತ್ಸವ ನಡೆಯಲಿದೆ ಎಂದು ಇಸ್ಕಾನ್ ಅವಧೂತ ಚಂದ್ರದಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದ ದಾವಣಗೆರೆಯಲ್ಲಿ ಪ್ರಪ್ರಥಮವಾಗಿ ಬಾರಿಗೆ ಜಗನ್ನಾಥ ರಥಯಾತ್ರೆ ನಡೆಯಲಿದೆ. ಶುಕ್ರವಾರ ಮಧ್ಯಾಹ್ನ 2ಕ್ಕೆ ದೊಡ್ಡಪೇಟೆಯ ಶ್ರೀ ಗಣೇಶ ದೇವಸ್ಥಾನದಿಂದ ರಥೋತ್ಸವ ಆರಂಭವಾಗಲಿದೆ. ಹಾಸಭಾವಿ ವೃತ್ತ, ಚಾಮರಾಜ ಪೇಟೆ, ಮಂಡಿಪೇಟೆ, ಗಾಂಧಿ ವೃತ್ತ, ಜಯದೇವ ವೃತ್ತ, ವಿದ್ಯಾರ್ಥಿ ಭವನದ ಮೂಲಕ ಕಾರ್ಯಕ್ರಮ ನಡೆಯುವ ಶ್ರೀ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಮುಕ್ತಾಯವಾಗಲಿದೆ.
ರಥೋತ್ಸವ ಬರುವ ಹತ್ತು ಜಾಗದಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀ ಭಕ್ತಿರಸಾಮೃತ ಸ್ವಾಮೀಜಿ ಅವರಿಂದ ಆಶೀವರ್ಚನ ನೀಡುವರು. ಜಗನ್ನಾಥ ರಥೋತ್ಸವದ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ತಿಳಿಸುವರು. ಆರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಿಳಿಸಿದರು.
ರಥೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ಶಾಮನೂರು ಶಿವಶಂಕರಪ್ಪ ಭಾಗವಹಿಸುವರು. ರಥೋತ್ಸವದಲ್ಲಿ ಒಡಿಶಾದ ಪುರಿ ಜಗನ್ನಾಥ ಮೂಲ ವಿಗ್ರಹ ಇಡುವುದು ವಿಶೇಷ. ದಾವಣಗೆರೆ ಜನರಿಗೆ ಜಗನ್ನಾಥ ರಥೋತ್ಸವ ನೋಡುವ ಅವಕಾಶ ಒದಗಿಸಲಾಗಿದೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ ಇಸ್ಕಾನ್ ದೇವಸ್ಥಾನ ನಿರ್ಮಾಣಕ್ಕೆ ಸೂಕ್ತ ನಿವೇಶನ ಪರಿಶೀಲನೆ ನಡೆಸಲಾಗುತ್ತಿದೆ. ಜಾಗ ದೊರೆತಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ಎಸ್.ಟಿ ವಿರೇಶ್, ಬಿಜೆಪಿ ಮುಖಂಡ ಶ್ರೀನಿವಾಸ್ ದಾಸಕರಿಯಪ್ಪ, ಪಾಲಿಕೆ ಸದಸ್ಯ ಪ್ರಸನ್ನಕುಮಾರ್, ಪಾಲಿಕೆ ವಿಪಕ್ಷ ನಾಯಕ ಮಂಜುನಾಥ್ ಗಡಿಗುಡಾಳ್, ವಿರೇಶ್ ಪೈಲ್ವಾನ್, ಸತ್ಯನಾರಾಯಣ, ಮೂರ್ತಿ ರೆಡ್ಡಿ, ನಾಗರಾಜರಾವ್ ಶಾನಭೋಗ್, ನರೇಂದ್ರ, ಹಾಲ್ಗುಡಿ ರಾಜು, ಪವನ್ ಇದ್ದರು.