ದಾವಣಗೆರೆ: ಊಟಕ್ಕೆ ಚಿಕನ್ ಮಾಡಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಕುಡಿದ ಮತ್ತಿನಲ್ಲಿ ಕೊಲೆ ಮಾಡಿ ಪರಾರಿಯಾದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ.
ಶೀಲಾ(28) ಕೊಲೆಯಾದ ಮಹಿಳೆಯಾಗಿದ್ದು, ಬನ್ನಿಕೋಡು ಗ್ರಾಮದ ಕೆಂಚಪ್ಪ ಕೊಲೆ ಮಾಡಿದ ಪತಿರಾಯ. ಶೀಲಾಳನ್ನು 9 ವರ್ಷಗಳ ಹಿಂದೆ ಕೆಂಚಪ್ಪ ಎರಡನೇ ಮದುವೆಯಾಗಿದ್ದ. ಆಗಾಗ ಇಬ್ಬರ ನಡುವೆ ಜಗಳಗಳಾಗುತ್ತಿತ್ತು. ಪೋಷಕರು ರಾಜೀ ಪಂಚಾಯಿತಿ ನಡೆಸಿ ಕೂಡಿ ಬಾಳುವಂತೆರ ಮಾಡುತ್ತಿದ್ದರು. ಆದರೆ ಪತಿ ಕೆಂಚಪ್ಪ ತನ್ನ ಪತ್ನಿ ಶೀಲಾ ಮೇಲೆ ಪದೇ ಪದೆ ಅನುಮಾನ ಪಡುತ್ತಿದ್ದನು.
ಕಳೆದ ರಾತ್ರಿ ಮದ್ಯಪಾನ ಮಾಡಿಕೊಂಡು ಬಂದ ಕೆಂಚಪ್ಪ ಚಿಕನ್ ಅಡುಗೆ ಯಾಕೆ ಮಾಡಿಲ್ಲ ಎಂದು ಗಲಾಟೆ ನಡೆಸಿ ಪತ್ನಿ ಶೀಲಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪತಿ ತಪ್ಪಿಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.



