ನವದೆಹಲಿ: ರೈತರಿಗೆ ಭಾರತೀಯ ಹವಾಮಾನ ಇಲಾಖೆ ಗುಡ್ ನ್ಯೂಸ್ ನೀಡಿದ್ದು, ಈ ಬಾರಿಯೂ ಮುಂಗಾರು ಮಳೆ ಉತ್ತಮವಾಗಿ ಆಗಲಿದೆ. ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ.
ಈ ವರ್ಷದ ಮುಂಗಾರು ಮಳೆ ಸರಾಸರಿ ಮಳೆ ಪ್ರಮಾಣ ದೀರ್ಘಾವಧಿಯಲ್ಲಿ ಶೇ 103ರಷ್ಟು ಆಗಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಮಾಹಿತಿ ನೀಡಿದ್ದಾರೆ.ಏಪ್ರಿಲ್ ತಿಂಗಳಿನಲ್ಲಿ ಭಾರತೀಯ ಹವಾಮಾನ ಇಲಾಖೆ ಭಾರತದಲ್ಲಿ ಈ ಋತುವಿನಲ್ಲಿ ಸಾಮಾನ್ಯ ಮಳೆಯಾಗುತ್ತದೆ ಎಂದು ಹೇಳಿತ್ತು. ಕೃಷಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯನ್ನೇ ಅವಲಂಬಿಸಿರುವ ಗುಜರಾತ್ನಿಂದ ಒಡಿಶಾದವರೆಗಿನ ರಾಜ್ಯಗಳಲ್ಲಿ ಈ ಮಾನ್ಸೂನ್ ಋತುವಿನಲ್ಲಿ ಶೇಕಡಾ 106ಕ್ಕಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಮಹಾಪಾತ್ರ ತಿಳಿಸಿದ್ದಾರೆ.
ಮಧ್ಯ ಭಾರತ ಮತ್ತು ದಕ್ಷಿಣ ಭಾರತದ ಪೆನಿನ್ಸುಲಾದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಅವರು ಹೇಳಿದರು. ಈಶಾನ್ಯ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.ಕೇರಳದ ಶೇಕಡ 70 ರಷ್ಟು ಹವಾಮಾನ ಕೇಂದ್ರಗಳು ವ್ಯಾಪಕ ಮಳೆಯನ್ನು ವರದಿ ಮಾಡಿದೆ ಮತ್ತು ಬಲವಾದ ಪಶ್ಚಿಮ ಮಾರುತಗಳು ಮತ್ತು ಪ್ರದೇಶದ ಮೇಲೆ ಮೋಡದ ರಚನೆಗೆ ಸಂಬಂಧಿಸಿದ ವರದಿ ನೀಡಲು ನಿಯತಾಂಕಗಳನ್ನು ಪೂರೈಸಲಾಗಿದೆ” ಎಂದು ಅವರು ಹೇಳಿದರು.
ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಸಾಮಾನ್ಯ ಸಮುದ್ರದ ಮೇಲ್ಮೈ ತಾಪಮಾನಕ್ಕಿಂತ ತಂಪಾಗಿರುವ ಋಣಾತ್ಮಕ ಬೆಳವಣಿಗೆಯಿಂದ ಕೇರಳದ ಕೆಲವು ಭಾಗಗಳು ಸೇರಿ ನೈಋತ್ಯ ಪರ್ಯಾಯ ದ್ವೀಪದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಬಹುದು ಎಂದಿದ್ದಾರೆ.ಜಮ್ಮು ಮತ್ತು ಕಾಶ್ಮೀರ, ಲಡಾಖ್, ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶವನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳು ಜೂನ್ನಲ್ಲಿ ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ ಕಡಿಮೆ ತಾಪಮಾನ ದಾಖಲಾಗುವ ನಿರೀಕ್ಷೆ ಇದೆ ಎಂದರು.



