ದಾವಣಗೆರೆ: ನಗರದ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ಮೂಲ ವಿಗ್ರಹದ ಪುನರ್ ಪ್ರತಿಷ್ಠಾನೆ ಮತ್ತು ಕಳಸಾರೋಹಣ ಕಾರ್ಯಕ್ರಮ ನಾಳೆಯಿಂದ (ಮೇ 9) ಮೇ11ರವರೆಗೆ ಜರುಗಲಿದೆ ಎಂದು ಕಾಳಿಕಾದೇವು ವಿಶ್ವಕರ್ಮ ದೇವಸ್ಥಾನದ ಆಡಳಿತ ಸಮಿತಿ ಟ್ರಸ್ಟ್ ಅಧ್ಯಕ್ಷ ಹಲವಾಗಲು ಹೆಚ್.ಓ.ವಿರೂಪಾಕ್ಷಚಾರ್ ತಿಳಿಸಿದ್ದಾರೆ.
ಕಾಳಿಕಾದೇವಿ ದೇವಾಲಯವು ಪುರಾತನ ಇತಿಹಾಸವಿರುವ ಶಕ್ತಿದೇವತೆಯಾಗಿದೆ. ಸನಾತನ ಧರ್ಮದಂತೆ ಶ್ರೀ ಕಾಳಿಕದೇವಿ ಪೂಜಾ ಕಾರ್ಯಕ್ರಮಗಳು ಜರುಗಲಿದೆ. ಮೇ 9 ರಂದು ಬೆಳಗ್ಗೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ. ಅಂದು ಸಂಜೆ ನವಗ್ರಹ ಆವಾಹನೆ, ಹೋಮ ಹವನಾದಿ ಕಾರ್ಯಕ್ರಮ ಜರುಗಲಿದೆ. ಮೇ 10ರಂದು ಬೆಳಗ್ಗೆ ದೇವತಾ ಆವಾಹನೆ, ಪ್ರಧಾನ ದೇವತಾ ಮಹಾಕಾಳಿ ಲಕ್ಷೀ ಮಹಾಸರಸ್ವತಿ ಆವಾಹನೆ ನಡೆಯಲಿದ್ದು ಸಂಜೆ ನವದುರ್ಗಾ ಹೋಮ, ಬಲಿಹರಣ, ಮಂಗಳಾರತಿ ನಡೆಯಲಿದೆ. ಮೇ.11 ರಂದು ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಕಾಳಿಕಾದೇವಿ ಪ್ರಾಣ ಪ್ರತಿಷ್ಠಾಪನೆ, ಕಾಳಿಮೂಲ ಮಂತ್ರ ಹೋಮ ಸೇರಿದಂತೆ ವಿಶೇಷ ಪೂಜೆ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳು ಪುರೋಹಿತ ಜಿ.ಬಿ ವೀರೇಶ್ ಆಚಾರ್ಯ ನೇತೃತ್ವದಲ್ಲಿ ಜರುಗಲಿದೆ. ಬಳಿಕ ಬೆಳಗ್ಗೆ 11.30ಕ್ಕೆ ಚನ್ನಗಿರಿ ಕಾಶಿಮಠದ ಶ್ರೀ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಆವರಗೊಳ್ಳದ ಓಂಕಾರ ಶಿವಾಚಾರ್ಯ ಶ್ರೀಗಳ ಸಾನಿಧ್ಯದಲ್ಲಿ ನಡೆಯುವ ವೇದಿಕೆ ಸಮಾರಂಭದ ಉದ್ಘಾಟನೆಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ನೆರವೇರಿಸಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ಹಲವಾಗಲು ಹೆಚ್.ಓ ವಿರೂಪಾಕ್ಷಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ ಸಿದ್ದೇಶ್ವರ್, ಸಾಸಕ ಎಸ್.ಎ ರವೀಂದ್ರನಾಥ್, ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ಮೇಯರ್ ಜಯಮ್ಮ ಗೋಪಿನಾಯ್ಕ್ ಸೇರಿದಂತೆ ಹಲವರು ಆಗಮಿಸಲಿದ್ದರೆ ಎಂದರು.



