ದಾವಣಗೆರೆ: ಸಣ್ಣ ಮತ್ತು ಅತೀ ಸಣ್ಣ ರೈತರು ತಮ್ಮ ಬೆಳೆಗಳಿಗೆ ಬೆಂಬಲ ಬೆಲೆ ಪಡೆಯಲು ರೈತ ಉತ್ಪಾದಕ ಕಂಪನಿಗಳು ಸಹಾಯವಾಗುತ್ತದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ಹರಿಹರ ತಾಲ್ಲೂಕಿನ ಮಲೇಬೆನ್ನೂರು ಗ್ರಾಮದಲ್ಲಿ ನಿಟ್ಟೂರು ತರಳಬಾಳು ಅಮೃತ ತೋಟಗಾರಿಕೆ ರೈತ ಉತ್ಪಾದಕ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರಿಹರ ತಾಲ್ಲೂಕಿನಲ್ಲಿ ಈ ಕಂಪನಿಯ ಮೂಲಕ ತೆಂಗಿನಲ್ಲಿ ಉಪ ಉತ್ಪನ್ನಗಳ ಬಳಕೆ, ಸಂಸ್ಕರಣೆ, ವರ್ಗಿಕರಣ ಮತ್ತು ಮಾರಾಟ ವ್ಯವಸ್ಥೆ ಕಲ್ಪಿಸುವುದು, ವೀಳ್ಯೆದೆಲೆಯಲ್ಲಿ ಉತ್ತಮ ಗುಣಮಟ್ಟದ ಎಲೆಗಳ ಉತ್ಪಾದನೆ, ಎಲೆಗಳ ರಫ್ತು ಯೋಜನೆ, ಸಿರಿಧಾನ್ಯಗಳ ಮೌಲ್ಯವರ್ಧನೆ ಮತ್ತು ಸಂಸ್ಕರಣೆ ಇನ್ನೂ ಮುಂತಾದ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಕಂಪನಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀಮತಿ ಜಿ.ಪಿ. ರೇಖಾರವರು ಮಾತನಾಡಿ ಇಲಾಖೆಯಿಂದ ಕೃಷಿ ಉಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ವತಿಯಿಂದ ಬೆಳೆ ವಿಸ್ತರಣೆ, ಸಂಸ್ಕರಣಾ ಕೇಂದ್ರಗಳ ಸ್ಥಾಪನೆಗೆ ಇಲಾಖೆ ಸಹಾಯ ಮಾಡಲಿದೆ ಎಂದು ತಿಳಿಸಿದರು. ಇಂದು ಕೃಷಿ ಕ್ಷೇತ್ರವು ಎದುರಿಸುತ್ತಿರುವ ಮಾರುಕಟ್ಟೆ ಸಮಸ್ಯಗೆ ಆರ್ಥಿಕ ಮತ್ತು ಸಾಮಾಜಿಕ ಲಾಭಗಳನ್ನು ಹೆಚ್ಚಿಸಲು ರೈತ ಉತ್ಪಾದಕ ಕಂಪನಿ ಸಹಾಯ ಮಾಡಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಂಪನಿಯ ಅಧ್ಯಕ್ಷರಾದ ಶ್ರೀ ಶಿವಪ್ಪ ಈ. ರವರು ಮಾತನಾಡಿ ತರಳಬಾಳು ಗುರುಗಳ ಕನಸಿನ ಕೂಸಾದ ಕಂಪನಿಗಳ ರಚನೆಯನ್ನು ನಾವು ಅವರ ಮಾರ್ಗದರ್ಶನದಲ್ಲಿ ಮುನ್ನೆಡೆಸಲು ಸಿದ್ದರಿದ್ದೇವೆ ಎಂದು ತಿಳಿಸಿದರು. ಮುಂದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಗಳು ಮಾಡುವ ಸೇವೆಯನ್ನು ನಾವು ರೈತ ಉತ್ಪಾದಕ ಕಂಪನಿಯಿಂದ ಮಾಡಲಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಮೋಹನ್ ಕುಮಾರ್, ಶಿವಕುಮಾರ್, ರಂಗನಾಥ್, ಹನುಮಂತಪ್ಪ, ಮಂಜುನಾಥ್, ಹನುಮಂತಗೌಡರು, ಸರೋಜಮ್ಮ ಪಾಟೀಲ್, ಉಮಾದೇವಿ ಹಾಗೂ ರೈತರಾದ ಜಯಣ್ಣನವರು, ಶಿವರಾಜ್ ಭಾಗವಹಿಸಿದ್ದರು.