ದಾವಣಗೆರೆ: ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣ ಹಿನ್ನೆಲೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಎಂ.ಪಿ. ದಾರಕೇಶ್ವರಯ್ಯ ಅವರಿಗೆ ದಲಿತ ಮುಖಂಡರು ದಾವಣಗೆರೆಯಲ್ಲಿ ಗೇರಾವ್ ಹಾಕಿದರು.
ಭಾರೀ ಗದ್ದಲ ಉಂಟಾಗುತ್ತಿದ್ದಂತೆ ಪೊಲೀಸರು ದಾರಕೇಶ್ವರಯ್ಯ ಅವರನ್ನು ರಕ್ಷಿಸಿ ವಾಹನದಲ್ಲಿ ಕರೆದುಕೊಂಡು ಹೋದರು.ಬೇಡ ಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿರುವುದನ್ನು ಖಂಡಿಸಿ ದಲಿತ ಮುಖಂಡರು ಮುತ್ತಿಗೆ ಹಾಕಿದರು. ನಾನು ಕಾನೂನು ಬದ್ಧವಾಗಿಯೇ ಬೇಡ ಜಂಗಮ ಪ್ರಮಾಣ ಪತ್ರ ಪಡೆದುಕೊಂಡಿದ್ದೇನೆ ಎಂದು ದ್ವಾರಕೇಶ್ವರಯ್ಯ ಸುದ್ದಿಗೋಷ್ಟಿ ನಡೆಸಿ ಹೊರ ಬರುತ್ತಿದ್ದಂತೆ ಪರಿಶಿಷ್ಟ ಸಮುದಾಯದ ಮುಖಂಡರು ಮುತ್ತಿಗೆ ಹಾಕಿ, ಘೋಷಣೆ ಕೂಗಿದರು.
ಈ ವೇಳೆ ಮಾತಿನ ಚಕಮಕಿ ನಡೆದು ಗಲಾಟೆ ಜೋರಾಯಿತು. ಕೂಡಲೇ ಅಲ್ಲೇ ಇದ್ದ ಪೊಲೀಸರು, ದಾರಕೇಶ್ವರಯ್ಯ ರಕ್ಷಣೆ ಮಾಡಿದರು.ದಲಿತರ ಹಕ್ಕನ್ನು ಕಿತ್ತುಕೊಂಡು ರೇಣುಕಾಚಾರ್ಯ ಹಾಗೂ ದಾರುಕೇಶ್ವರಯ್ಯ ಅವರನ್ನು ಬಂಧಿಸಬೇಕು ಎಂದು ಆಕ್ರೋಶ ವ್ಯಕ್ತಪಡಿದರು.
ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ್ವಾರಕೇಶ್ವರಯ್ಯ, ನಮ್ಮ ಕುಟುಂಬ ಪಡೆದ ಬೇಡ ಜಂಗಮ ಜಾತಿ ಪ್ರಮಾಣಪತ್ರವನ್ನು ಹೈಕೋರ್ಟ್ ಸಿಂಧುಗೊಳಿಸಿದೆ. ವಿಧಾನಸಭೆಯಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ಶಾಸಕ ಪಿ. ರಾಜೀವ್, ಗೂಳಿಹಟ್ಟಿ ಶೇಖರ್, ಪ್ರಿಯಾಂಕ ಖರ್ಗೆ, ಎನ್.ಮಹೇಶ್ ಅವರ ಶಾಸತಕತ್ವವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ನನ್ನ ಸಹೋದರನ ಪುತ್ರಿ ಚೇತನಾಗೆ ಬೇಡ ಜಂಗಮ ಪ್ರಮಾಣಪತ್ರವನ್ನು ನಾನು ಕೊಡಿಸಿದ್ದರೂ ಯಾವುದೇ ಸರ್ಕಾರಿ ಸೌಲಭ್ಯವನ್ನು ಪಡೆದುಕೊಂಡಿಲ್ಲ ಎಂದರು.



