ಬೆಂಗಳೂರು: ಪ್ರಾಥಮಿಕ ಶಾಲೆಯ 6ರಿಂದ 8ರವರೆಗಿನ 15 ಸಾವಿರ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿಗೆ ಮೇ 21 , 22 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಾ. 21ರಂದು ಅಧಿಸೂಚನೆ ಹೊರಡಿಸಲಿದ್ದು, ಸಿಇಟಿ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
15 ಸಾವಿರ ಶಿಕ್ಷಕರಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಹುದ್ದೆಗಳು ಮೀಸಲಾಗಿರುತ್ತವೆ. 10 ಸಾವಿರ ಉಳಿದ ಭಾಗಕ್ಕೆ ಮೀಸಲಿಡಲಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾ. 23ರಿಂದ ಏಪ್ರಿಲ್ 22ರವರೆಗೆ ಅವಕಾಶವಿದೆ. ರಾಜ್ಯದಲ್ಲಿ 1ರಿಂದ 8ನೇ ತರಗತಿ ವರೆಗಿನ ಶಿಕ್ಷಕರ ಹುದ್ದೆಗಳಲ್ಲಿ 30 ಸಾವಿರ ಹುದ್ದೆಗಳು ಖಾಲಿ ಇವೆ. ಆದರೆ, 6 ರಿಂದ 8 ನೇ ತರಗತಿಗೆ ಹೆಚ್ಚಿನ ಕೊರತೆ ಇರುವುದರಿಂದ ನೇಮಕಾತಿ ನಡೆಯುತ್ತಿದೆ.
- ಪರೀಕ್ಷೆ ಮುಖ್ಯ ಮಾಹಿತಿ
- ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೂರು ಪತ್ರಿಕೆ
- ಪತ್ರಿಕೆ-1 (ಬಹು ಆಯ್ಕೆ ಮಾದರಿ) 150 ಅಂಕ
- ಪತ್ರಿಕೆ-2 ವಿಷಯವು ಸಾಮರ್ಥ್ಯ ಅಥವಾ ಜ್ಞಾನ (ಜನರಲ್ ನಾಲೆಜ್) ಗರಿಷ್ಠ ಅಂಕ 150. ಇದರಲ್ಲಿ 50 ಅಂಕಗಳಿಗೆ ಬಹು ಆಯ್ಕೆ ಮಾದರಿ ಹಾಗೂ 100 ಅಂಕಗಳಿಗೆ ವಿವರಣಾತ್ಮಕ ಮಾದರಿ (ಕನಿಷ್ಠ 45 ಅಂಕಗಳನ್ನು ಗಳಿಸುವುದು ಕಡ್ಡಾಯ.)
- ಪತ್ರಿಕೆ-3 ಭಾಷಾ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು, ವಿವರಣಾತ್ಮಕ ಮಾದರಿ ಗರಿಷ್ಠ ಅಂಕ 100 (ಕನಿಷ್ಠ ಶೇ 50 ಅಂಕ ಕಡ್ಡಾಯ)
- ಕೋವಿಡ್ ಹಿನ್ನೆಲೆ ಎರಡು ವರ್ಷಗಳ ವಯೋಮಿತಿ ಸಡಿಲ
- ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಅಂಗವಿಕಲರಿಗೆ 47 ವರ್ಷ
- ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿಯರಿಗೆ 43 ವರ್ಷ ಗರಿಷ್ಠ ಇದ್ದುದನ್ನು 45ಕ್ಕೆ ಏರಿಸಲಾಗಿದೆ
- ಸಾಮಾನ್ಯ ವರ್ಗದವರ ಗರಿಷ್ಠ ವಯೋಮಿತಿ 40 ಇದ್ದುದನ್ನು 42ಕ್ಕೆ ಏರಿಸಲಾಗಿದೆ
- ಈ ಬಾರಿ ಎಂಜಿನಿಯರಿಂಗ್ ಪದವಿ ಪೂರೈಸಿ ಬಿ.ಇಡಿ ಅಥವಾ ಟಿಇಟಿ ಪೂರೈಸಿದವರನ್ನೂ ಪರಿಗಣನೆ



