ದಾವಣಗೆರೆ: ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ ಮಾಡುವ ಮೂಲಕ ಜಾತ್ರಾ ಮಹೋತ್ಸಕ್ಕೆ ಚಾಲನೆ ನೀಡಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ ಜೋಯಿಷ್ ನೇತೃತ್ವದಲ್ಲಿ ಶ್ರೀದೇವಿಗೆ ಪಂಚಾಮೃತ ಅಭಿಷೇಕ, ಕಂಕಣಧಾರಣೆ ಮಾಡಿ ವಿಧಿ-ವಿಧಾನಗಳ ಮೂಲಕ ಪೂಜೆ ನೆರವೇರಿಸಿ ಜಾತ್ರೆಗೆ ಚಾಲನೆ ನೀಡಲಾಯಿತು. ರಾತ್ರಿ ಶ್ರೀದುರ್ಗಾಂಬಿಕ ದೇವಿ ಜಾತ್ರೆಯ ಪಟ್ಟದ ಕೋಣದ ಮೆರವಣಿಗೆಯನ್ನು ನಗರದ ಹಳೇ ಭಾಗದ ನಡೆಸಿ, ಸಾರ ಹಾಕುವ ಕಾರ್ಯ ನಡೆಯಿತು.
ಮಾ.15ರಂದು ಬೆಳ್ಳಿಗ್ಗೆ ದಾಸೋಹದ ಮಹೋಪಕರಣ ಸಮಾರಂಭೋತ್ಸವ, ರಾತ್ರಿ ದೇವಿಗೆ ಭಕ್ತಿ ಸಮರ್ಪಣೆ, ಸಾಂಸ್ಕೃತಿಕ ಮೇಳ, ಡೊಳ್ಳು ಕುಣಿತ, ಸಿಡಿಮದ್ದಿನ ಪ್ರದರ್ಶನದ ಜೊತೆಗೆ ಬೆಳ್ಳಿಯ ರಥದಲ್ಲಿ ಅಮ್ಮನವರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.
16 ಬುಧವಾರ ಮುಂಜಾನೆ ಜಿಲ್ಲಾಧಿಕಾರಿ, ಎಸ್ಪಿ ಸಮ್ಮುಖದಲ್ಲಿ ಕೋಣದ ರಕ್ತವನ್ನು ಸೀರಿಂಜ್ ಮೂಲಕ ತೆಗೆದು ದೇವಿಗೆ ಅರ್ಪಿಸಲಾಗುವುದು. ನಂತರ ಬೆಳಿಗ್ಗೆ ದೇವಸ್ಥಾನದಿಂದ ಚರಗ ಊರಿನ ಎಲ್ಲ ಕಡೆಯು ತೆರಳಲಿದೆ ಎಂದು ಮಾಹಿತಿ ನೀಡಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಮಾ.18 ರಿಂದ 20ರವರೆಗೆ ಬಯಲು ಜಂಗಿ ಕುಸ್ತಿ ಆಯೋಜಿಸಿದ್ದು, ಕುಸ್ತಿಯಲ್ಲಿ ಗೆದ್ದ ಪಟುಗಳಿಗೆ 2 ಕೆ.ಜಿ. ತೂಕದ ಬೆಳ್ಳಿ ಗದೆ ಮತ್ತು 25 ಸಾವಿರ ರೂ. ಬಹುಮಾನ ನೀಡಲಾಗುವುದು. ಮೂರು ದಿವಸ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುಸ್ತಿಪಟುಗಳಿಗೆ ಎವಿಕೆ ಕಾಲೇಜು ರಸ್ತೆಯ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಮಾ.18 ರಿಂದ 27ರವರೆಗೆ ದೇವಸ್ಥಾನ ಮುಂಭಾಗದ ವೇದಿಕೆಯಲ್ಲಿ ರಾತ್ರಿ 8 ಗಂಟೆಯಿಂದ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.



