ದಾವಣಗೆರೆ: ನಿಮ್ಮ ಶಾಂತನಗೌಡರಿಗೆ ಈ ಬಾರಿ ಟಿಕೆಟ್ ಕೊಡಿಸಿ ಕುರುಬರ ಮತ ಪಡೆಯಿರಿ ನೋಡೋಣ. ಶಾಂತನಗೌಡರಿಗೆ ಲಿಂಗಾಯತರ ವೋಟ್ ಕೂಡ ಬೀಳೋದಿಲ್ಲ. ನನ್ನ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ನೋಡಿ ನಿಮಗೆ ಕುರುಬರು ವೋಟ್ ಕೊಡ್ತಾರೆ. ಟಿಕೆಟ್ ಬಗ್ಗೆ ನೀವ್ಯಾಕೆ ಮಾತನಾಡುತ್ತೀರಿ? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾಜಿ ಶಾಸಕ ಶಾಂತನಗೌಡ ಅಭಿಮಾನಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜಪ್ಪ ಬೈದಿರುವ ಆಡಿಯೋ ವೈರಲ್ ಆಗಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಬಿ. ಮಂಜಪ್ಪ, ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ನಡುವೆ ಮುಂಬರುವ ವಿಧಾನ ಸಭೆ ಚುನಾವಣೆ ಟಿಕೆಟ್ ಗೆ ಈಗಿನಿಂದಲೇ ಫೈಟ್ ಶುರುವಾಗಿದೆ. ಈ ಬಗ್ಗೆ ಶಾಂತನಗೌಡ ಅಭಿಮಾನಿ ಮತ್ತು ಸ್ವತಃ ಮಂಜಪ್ಪ ನಡುವೆ ನಡೆದಿರುವ ಟಾಕ್ ವಾರ್, ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ಮಂಜಪ್ಪ, ಶಾಂತನಗೌಡ ಅಭಿಮಾನಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡಿದ್ದಾರೆ. ಆಡಿಯೋದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಳಸಿರುವ ಭಾಷೆ ಶಾಂತನಗೌಡ ಅಭಿಮಾನಿಗಳನ್ನು ಕೆರಳಿಸಿದೆ.
ಈ ಆಡಿಯೋ ಹೊನ್ನಾಳಿ ಕಾಂಗ್ರೆಸ್ ನಲ್ಲಿ ಬಣ ರಾಜಕಾರಣಕ್ಕೆ ಕಾರಣವಾಗಿದೆ. ಬಿಜೆಪಿ ಇದನ್ನೇ ದಾಳವನ್ನಾಗಿಸಿ ಮಂಜಪ್ಪ ಅವರ ಕಾಲು ಎಳೆದಿದೆ. 7 ನಿಮಿಷದ ಆಡಿಯೋದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ವಿಚಾರವಾಗ ಹೆಚ್ಚು ಚರ್ಚೆಯಾಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜಪ್ಪ ಹಾಗೂ ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಜವಾಬ್ದಾರಿ ಹೊತ್ತ ಶಿವರಾಜ್ ನಡುವೆ ಟಾಕ್ ವಾರ್ ನಡೆದಿದೆ.
ಫೇಸ್ಬುಕ್ನಲ್ಲಿ ಮುಂದಿನ ಕಾಂಗ್ರೆಸ್ ಟಿಕೆಟ್ ಹೆಚ್. ಬಿ. ಮಂಜಪ್ಪಗೆ ಅಂತಾ ಹಾಕಲಾಗಿತ್ತು. ಇದು ಮಾಜಿ ಶಾಸಕ ಶಾಂತನಗೌಡರ ಅಭಿಮಾನಿಗಳನ್ನು ಕೆರಳುವಂತೆ ಮಾಡಿತ್ತು. ಇದಕ್ಕೆ ಕಮೆಂಟ್ ಮಾಡಿದ್ದ ಶಾಂತನಗೌಡರ ಅಭಿಮಾನಿಗಳು ಟಿಕೆಟ್ ಈ ಬಾರಿ ಶಾಂತನಗೌಡರಿಗೆ ಅಂತಾ ಪ್ರತಿಕ್ರಿಯಿಸಿದ್ದರು. ಕಾಂಗ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಶಿವರಾಜ್ ಲಿಂಗಾಯತರಾದ ಶಾಂತನಗೌಡರಿಗೆ ಟಿಕೆಟ್ ಅಂತ ಕಾಮೆಂಟ್ ಹಾಕಿದ್ದರು.
ಕಳೆದ ತಿಂಗಳ ಹಿಂದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜಪ್ಪರ ಮಗಳ ಮದುವೆಯಿತ್ತು. ಈ ವೇಳೆ ಮಗಳು ಮದುವೆಗೆ ಆಹ್ವಾನಿಸಲು ಹೋದಾಗ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದರು. ಈ ಫೋಟೋ ಹಾಕಿ ಕಾಂಗ್ರೆಸ್ ಟಿಕೆಟ್ಗೆ ಮಂಜಪ್ಪ ಮಗಳ ಮದುವೆ ನೆಪಮಾಡಿಕೊಂಡು ಅಲೆಯುತ್ತಿದ್ದಾರೆ. ಅವರಿಗೆ ಈ ಬಾರಿಯಾದರೂ ಒಳ್ಳೆಯದಾಗಲಿ ಅಂತ ಬಿಜೆಪಿ ಪೋಸ್ಟ್ ಮಾಡಿದೆ. ಇದು ಶಾಂತನಗೌಡ ಬೆಂಬಲಿಗರ ಅಸಮಾಧನಕ್ಕೆ ಕಾರಣವಾಗಿದೆ. ಇದರಿಂದ ಕೆರಳಿದ್ದ ಮಂಜಪ್ಪ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.



