ದಾವಣಗೆರೆ: ತಾಲೂಕಿನ ಹೊನ್ನೂರು ಕೆರೆಯ ಕೋಡಿ ಎತ್ತರ ಹೆಚ್ಚಳದಿಂದ ನೂರಾರು ಎಕರೆ ಜಮೀನಿನಲ್ಲಿ ನೀರು ನುಗ್ಗಿ ರೈತರಿಗೆ ಸಮಸ್ಯೆ ಆಗುತ್ತಿದ್ದು, ಕೋಡಿ ಎತ್ತರ ಕಡಿಮೆ ಮಾಡಬೇಕೆಂದು ಮಲ್ಲಶೆಟ್ಟಿಹಳ್ಳಿ ಗ್ರಾಮ ರೇವಣಸಿದ್ದಪ್ಪ ದಳವಾಯಿ ಆಗ್ರಹಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 45 ವರ್ಷಗಳ ಹಿಂದೆ ಹೊನ್ನೂರು ಕೆರೆ ತುಂಬಿತ್ತು. ಆದರೂ ನೀರು ಜಮೀನುಗಳಲ್ಲಿ ನಿಂತಿರಲಿಲ್ಲ. ಕಡಿಮೆ ಆಳ ಇದ್ದ ಕಾರಣ ಕೋಡಿ ಬಿದ್ದಾಗ ಸುಮಾರು 15ರಿಂದ 20 ದಿನಗಳೊಳಗೆ ನೀರು ಹಿಂದಕ್ಕೆ ಹೋಗುತಿತ್ತು. ಈಗ ಕೋಡಿ ಎತ್ತರ ಹೆಚ್ಚಿಸಿದ್ದರಿಂದ ಆಳ ಕೂಡ ಹೆಚ್ಚಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೊಗ್ಗನೂರು ಕೆರೆ, ಆನಗೋಡು, ಸಿದ್ದನೂರು ಕೆರೆ ಕೋಡಿ ಬಿದ್ದು ಅಪಾರ ಪ್ರಮಾಣದಲ್ಲಿ ಹೊನ್ನೂರು ಕೆರೆಗೆ ಹರಿದು ಬರುತ್ತಿದೆ. ಇದರಿಂದ ದಕ್ಷಿಣ ದಿಕ್ಕಿನಲ್ಲಿರುವ ಆನಗೋಡು, ನೇರ್ಲಿಗೆ, ಬುಳ್ಳಾಪುರ, ಕರಿಲಕ್ಕೇನಹಳ್ಳಿ, ಮಲ್ಲಶೆಟ್ಟಿಹಳ್ಳಿ ಗ್ರಾಮಗಳಲ್ಲಿ ಬೆಳೆದಿರುವ ಭತ್ತ, ಅಡಿಕೆ ಹಾಗೂ ತರಕಾರಿ ಬೆಳೆಗಳು ನೀರಿನಲ್ಲಿ ನಿಂತು ಕೊಳೆತು ಹೋಗಿ ನಷ್ವವಾಗಿದೆ.
ಕೆರೆಯ ಏರಿಯ ಹತ್ತಿರ ಎರಡು ತೂಬುಗಳಿದ್ದು, ಈಗ ಈ ತೂಬುಗಳಿಂದ ನೀರು ಹೊರಹೋಗದಂತೆ ಬಂದೋಬಸ್ತ್ ಮಾಡಲಾಗಿದೆ. ಇದರಿಂದ ಜಮೀನಿನಲ್ಲಿ ನೀರು ನಿಂತು ಸಮಸ್ಯೆ ಆಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಸಂಸದರು, ಮಾಯಕೊಂಡ ಶಾಸಕರು, ಅಧಿಕಾರಿಗಳು ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಕೋಡಿ ಎತ್ತರ ಕಡಿಮೆ ಮಾಡಬೇಕು. ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕೆಂದು ಮಲ್ಲಶೆಟ್ಟಿಹಳ್ಳಿ ಹಾಗೂ ನರಸೀಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಜಿ.ಎಂ ಗಿರೀಶ್, ರತ್ನಮ್ಮ, ಎಂ.ಎಸ್ ಬಸವರಾಜಪ್ಪ, ಡೋಲಿ ಚಂದ್ರು, ಬಸವರಾಜಪ್ಪ, ರಾಘವೇಂದ್ರ, ಸಂಪತ್ ಮತ್ತಿತರರು ಉಪಸ್ಥಿತರಿದ್ದರು.



