ದಾವಣಗೆರೆ: ದಾವಣಗೆರೆಯಲ್ಲಿ 2.65 ಲಕ್ಷ ಮೌಲ್ಯದ ನಕಲಿ ರಸಗೊಬ್ಬರ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಒರ್ವನನ್ನು ಬಂಧಿಸಲಾಗಿದೆ.
ಕೃಷಿ ವಿಚಕ್ಷಣಾ ದಳವು ರೈತರ ದೂರಿನ ಆಧಾರದ ಮೇಲೆ ದಾಳಿ ಮಾಡಿದೆ. ದಾವಣಗೆರೆ ತಾಲೂಕಿನ ರಾಮಪುರ ಗ್ರಾಮದ ಬಳಿ ಜಗಳೂರು ರಸ್ತೆಯಲ್ಲಿ ಸಾವಯವ ಗೊಬ್ಬರವೆಂದು ನಕಲಿ ಪೊಟ್ಯಾಷಿಯಂ ಗೊಬ್ಬರ ಸಾಗಿಸುತ್ತಿದ್ದ ಲಾರಿಯನ್ನು ಪತ್ತೆ ಮಾಡಲಾಗಿದೆ. ಈ ವೇಳೆ ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳು ಸುಮಾರು 2.65ಲಕ್ಷ ರೂ.ಮೌಲ್ಯದ ನಕಲಿ ಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ.
ಲಾರಿಯು ಮೈಸೂರಿನಿಂದ ಬಂದಿದ್ದು ಇದರಲ್ಲಿ ಒಟ್ಟು 260 ಚೀಲ ರಸಗೊಬ್ಬರವಿತ್ತು. ರಸಗೊಬ್ಬರದ ಕುರಿತು ದಾಖಲೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ಆರ್ಗಾನಿಕ್ ಮನ್ಸೂರ್ ದಾವಣಗೆರೆ ಇವರ ಹೆಸರಿನಲ್ಲಿ ನಮೂದಿಸಿ 200 ಚೀಲ ಎಂದು ಬಿಲ್ ಮಾಡಲಾಗಿತ್ತು. ಲಾರಿಯನ್ನು ಪರಿಶೀಲಿಸಿದಾಗ ಲಾರಿಯಲ್ಲಿ ಅನುಮಾನಾಸ್ಪದ ರಸಗೊಬ್ಬರದ ಚೀಲಗಳು ಇರುವುದು ಕಂಡು ಬಂದಿದೆ. ಚೀಲದ ಮೇಲೆ 60 % K2O ಎಂದು ನಮೂದಿಸಿದ್ದು ಇಂಡಿಯನ್ ಫೋಟ್ಯಾಷ್ ಲಿಮಿಟೆಡ್ ಎಂಬ ಕಂಪನಿಯಿಂದ ತಯಾರಾಗಿದೆ ಎಂದು ನಮೂದಿಸಿರುವುದು ಕಂಡು ಬಂದಿರುತ್ತದೆ.
ಆದರೆ ಈ ರಸಗೊಬ್ಬರಲ್ಲಿ , ಯಾವುದೇ ರೀತಿಯ ದಾಖಲೆಗಳು ಇರುವುದಿಲ್ಲ.ಲಾರಿ ಚಾಲಕ ತಪ್ಪಿಸಿಕೊಳ್ಳಲು ಯತ್ನಿಸಿದಾಗ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಸಾವಯವ ರಸಗೊಬ್ಬರ ಎಂದು ಕಂಡುಬಂದಿದೆ. ಈ ಸಂಬಂಧ ದಾವಣಗೆರೆ ಗ್ರಾಮೀಣ ವೃತ್ತ ಉಪವಿಭಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ಚಾಲಕ ಮಧುಸೂದನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ದಾಳಿಯಲ್ಲಿ ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳಾದ ಸುನೀಲ್, ಗೋವರ್ಧನ್ ಭಾಗಿಯಾಗಿದ್ದರು.



