ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದೆ. ನಿನ್ನೆ( ಅ.12) ಕೂಡ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಅದರಲ್ಲೂ ಹರಿಹರ ತಾಲ್ಲೂಕಿನಲ್ಲಿ ವರಣ ಅಬ್ಬರ ಜೋರಾಗಿದ್ದು ತಗ್ಗು ಪ್ರದೇಶಗಳಿಗೆ ನುಗ್ಗಿ ಮೆಕ್ಕೆಜೋಳ, ಭತ್ತ ಬೆಳೆಗೆ ಹಾನಿಯಾಗಿದೆ.
ಹರಿಹರದಲ್ಲಿ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಸಾವಿರರು ಎಕರೆ ಬೆಳೆದಿದ್ದ ಬೆಳೆ ನಾಶವಾಗಿದೆ. ನಿನ್ನೆ ರಾತ್ರಿ 7 ಗಂಟೆಯಿಂದ ತಡರಾತ್ರಿ ವರೆಗೂ ಎಡೆಬಿಡದೇ ಸುರಿದಿದೆ. ಭಾನುವಳ್ಳಿ, ಕಮಲಾಪುರ ಹಾಗೂ ಯಲವಟ್ಟಿ ತಾಂಡ ಸಂಪೂರ್ಣ ಜಲಾವೃತ್ತವಾಗಿದೆ. ಒಂದು ಹಸು ಮೃತಪಟ್ಟಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರನ್ನು ರಾತ್ರೋರಾತ್ರಿ ಸ್ಥಳಾಂತರ ಮಾಡಲಾಯಿತು. ಇನ್ನು ಮಲೇಬೆನ್ನೂರು ಹೋಬಳಿಯಲ್ಲಿಯೂ ಭಾರೀ ಮಳೆ ಸುರಿದಿದೆ. ತಹಶೀಲ್ದಾರ್ ರಾಮಚಂದ್ರಪ್ಪ, ಆರ್ಐ ಆನಂದ್ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಇನ್ನು ಕಮಲಾಪುರ ಮನೆಗಳಿಗೆ ನೀರು ನುಗ್ಗಿ 5 ಮನೆಗಳಿಗೆ ಹಾನಿಯಾಗಿದೆ. ಮನೆಯ ದಾಸ್ತಾನು ನನೆದು ಹೋಗಿವೆ. ಕಮಲಾಪುರ ಗ್ರಾಮದ ಶಾಲೆಯಲ್ಲಿ ಗಂಜಿಕೇಂದ್ರ ಆರಂಭಿಸಲಾಗಿದೆ. ಚನ್ನಗಿರಿ ತಾಲೂಕಿನಲ್ಲಿ ಹರಿದ್ರಾವತಿ ಹಳ್ಳ ತುಂಬಿ ಹರಿಯುತ್ತಿದೆ. ಸುಕ್ಷೇತ್ರ ಮಾವಿನಹೊಳೆ ಗ್ರಾಮದಲ್ಲಿರುವ ಪುರಾತನ ಕೆರೆ ಕೋಡಿ ಬಿದ್ದಿದೆ.



