ದಾವಣಗೆರೆ: ನಗರದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಇಂದಿನಿಂದ(ಅ. 07) ಅ. 16 ವರೆಗೆ ಸಂಭ್ರಮದಿಂದ ನವರಾತ್ರಿ ಮಹೋತ್ಸವ ಹಾಗೂ ಪುರಾಣ ಪ್ರವಚನ ನಡೆಯಲಿದೆ. ಈ ಬಾರಿ 5 ಲಕ್ಷ ವೆಚ್ಚದಲ್ಲಿ 5 ಅಡಿ ಎತ್ತರದ ಚಿನ್ನ ಲೇಪಿತ ಹಿತ್ತಾಳೆಯ ದೇವಿಯ ಉತ್ಸವ ಮೂರ್ತಿಯನ್ನೇ ನವರಾತ್ರಿಯಲ್ಲಿ ಪ್ರತಿಷ್ಠಾಪಿಸಿರುವುದು ವಿಶೇಷ.
ಇಂದು ಬೆಳಿಗ್ಗೆ 6.30ಕ್ಕೆ ವಿಘ್ನೇಶ್ವರ ಘಟ ಸ್ಥಾಪನೆ ಹಾಗೂ ದೇವಿಗೆ ಪಂಚಾಮೃತ ಅಭಿಷೇಕ ಮೂಲಕ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.ಪ್ರತಿ ದಿನ ಬೆಳಿಗ್ಗೆ 8 ಗಂಟೆಯಿಂದ ದೇವಸ್ಥಾನದ ಪಾದಗಟ್ಟೆ ಬಳಿ ಶ್ರೀದೇವಿ ಪುರಾಣ ಪ್ರವಚನವನ್ನು ಹಾವೇರಿ ಜಿಲ್ಲೆಯ ಹಾವನೂರಿನ ಕರಡಗಿ ಗ್ರಾಮದ ಹರಿಕಥಾ ವಿದ್ವಾನ್ ರೇವಣಸಿದ್ದಯ್ಯ ಶಾಸ್ತ್ರಿ ನೆರವೇರಿಸಿಕೊಡಲಿದ್ದಾರೆ. ಹತ್ತು ದಿನಗಳ ಕಾಲ ದೇವಿಗೆ ವಿವಿಧ ಬಗೆಯ ಅಲಂಕಾರ ಮಾಡಿ ಪೂಜೆ ನಡೆಯಲಿದೆ.
ಟ್ರಸ್ಟ್ನ ಗೌರವ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ಕಾರ್ಯಾಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ ಅವರು ಕುಟುಂಬ ಸಮೇತ ಪಾಲ್ಗೊಂಡು ದೀಪ ಬೆಳಗಿಸುವ ಮೂಲಕ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಿದರು. ಟ್ರಸ್ಟ್ನ ಎಲ್ಲಾ ಸದಸ್ಯ, ಗೌಡರು, ಶಾನಭೋಗರು, ಬಣಕಾರರು, ರೈತರು, ಬಾರಿಕರು, ಕುಂಬಾರರು ಹಾಗೂ ಸಾಂಸ್ಕೃತಿ ಸಮಿತಿಯ ಸದಸ್ಯರೆಲ್ಲ ಪಾಲ್ಗೊಂಡಿದ್ದರು
ನವರಾತ್ರಿ ಉತ್ಸವದಲ್ಲಿ ಪ್ರತಿ ದಿನ ಒಂದೊಂದು ರೀತಿ ಅಲಂಕಾರ ವಿಶೇಷವಾಗಿರಲಿದೆ. ಅ.7 ; ಹಂಸವಾಹಿನಿ, ಅ.8 ; ವೃಷಭ ವಾಹನ, ಅ.9 ; ಮಯೂರ ವಾಹನ, ಅ.10 ; ಗರುಡ ವಾಹನ, ಅ.11 ; ಮೋಹಿನಿ, ಅ.12 ; ಸರಸ್ವತಿ, ಅ.13 ; ರಾಜರಾಜೇಶ್ವರಿ, ಅ. 14 ; ಸಿಂಹವಾಹನ, ಅ.15 ; ಗಜಲಕ್ಷ್ಮಿ, ಅ.16 ; ಲಕ್ಷ್ಮಿ ಅಲಂಕಾರ ಇರಲಿದೆ.
ಅ.14ರಂದು ಬೆಳಿಗ್ಗೆ 10.30ಕ್ಕೆ ಆಯುಧ ಪೂಜೆ ಹಾಗೂ ಕುಂಭಾಭಿಷೇಕ ನಡೆಯಲಿದೆ. 15ರಂದು ವಿಜಯದಶಮಿ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. 16ರಂದು ಕಳಸ ಪೂಜೆಯ ಬಳಿಕ ಓಂಕಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ನವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರು ಕಡ್ಡಾಯವಾಗಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಗೌಡ್ರು ಚನ್ನಬಸಪ್ಪ ತಿಳಿಸಿದ್ಧಾರೆ.



