ಬೆಂಗಳೂರು: ಬಿಜೆಪಿ ದೇಶಭಕ್ತರ ಪಕ್ಷ. ಕಾಂಗ್ರೆಸ್ ಗುಲಾಮಗಿರಿ ಪಕ್ಷವಾಗಿದೆ. ಅವರಿಗೆ ದೇಶ ಭಕ್ತಿಯ ಬಗ್ಗೆ ಎಳ್ಳಷ್ಟು ಗೌರವವಿಲ್ಲವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿ ತಾಲಿಬಾನ್ ಪಕ್ಷವೆಂದ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದರು. ಕಾಂಗ್ರೆಸ್ ಪಕ್ಷ ಇನ್ನೂ ಗುಲಾಮಗಿರಿಯಿಂದ ಹೊರಬಂದಿಲ್ಲ. ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ಏನು ಮಾತನಾಡಿದ್ದಾರೆ ಎಂಬುದನ್ನು ನಾನು ಗಮನಿಸಿದ್ದೇನೆ. ಮಾಜಿ ಮುಖ್ಯಮಂತ್ರಿಯಾಗಿ ಮಾತನಾಡುವ ರೀತಿ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಕಾಂಗ್ರೆಸ್ ಎಲ್ಲಿಯವರೆಗೂ ಗುಲಾಮಗಿರಿಯಿಂದ ಹೊರಬರುವುದಿಲ್ಲವೋ. ಅಲ್ಲಿಯ ತನಕ ಆ ಪಕ್ಷ ಉದ್ದಾರವಾಗುವುದಿಲ್ಲ. ಎಲ್ಲದರಲ್ಲೂ ತಪ್ಪು ಹುಡುಕುವ ಪ್ರವೃತಿ ಬೆಳೆಸಿಕೊಂಡಿದ್ದಾರೆ ಎಂದರು.



