ದಾವಣಗೆರೆ: ನಂಜನಗೂಡು ಮಂದಿರದಂತಹ ಘಟನೆ ಮತ್ತೆ ಮರುಕಳಿಸದಂತೆ ಕ್ರಮ ತಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಂಜನಗೂಡು ಮಂದಿರ ನೆಲಸಮ ಘಟನೆ ನೋವು ತಂದಿದೆ. ಅಲ್ಲಿನ ಜಿಲ್ಲಾಡಳಿತ ನಮ್ಮ ಗಮನಕ್ಕೆ ತರದೇ ಘಟನೆ ನಡೆದಿದೆ. ಶಾಂತಿ ಕದಡದಂತೆ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಎಲ್ಲರಿಗೂ ಒಪ್ಪಿಗೆ ಆಗುವಂತೆ ನಮ್ಮ ನಿರ್ಧಾರ ಇರುತ್ತದೆ. ನಿಮ್ಮ ನೋವು ಭಾವನೆಗೆ ಸ್ಪಂದಿಸಿ, ನಿಮ್ಮ ಮನಸ್ಸಿಗೆ ತಕ್ಕಂತೆ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ವಿನಂತಿ ಮಾಡಿದರು. ನಮ್ಮ ನಡುವೆ ಕೆಲ ಸೂಕ್ಷ್ಮ ವಿಚಾರಗಳಿವೆ. ಎಲ್ಲ ಸಮುದಾಯದ ಆಶೋತ್ತರ ಹೆಚ್ಚಾಗಿವೆ. ಅವರಿಗೆ ಸ್ಪಂದಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
ಜಿಪಂ, ತಾಪಂ, ಉಪ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಸೊಸೈಟಿ ಚುನಾವಣೆಯನ್ನು ನಿರ್ಲಕ್ಷ್ಯ ಮಾಡುವಿದಿಲ್ಲ. ಇದೇ ಕಾರಣಕ್ಕೆ ಮೂರು ಪಾಲಿಕೆಗಳಲ್ಲಿ ಆಡಳಿತ ಹಿಡಿಯಲಿದ್ದೇವೆ. ಕಲಬುರಗಿ 24 ಸ್ಥಾನಗಳಿವೆ, ದೊಡ್ಡಬಳ್ಳಾಪುರದಲ್ಲಿ ಸಂಪೂರ್ಣ ಮೆಜಾರಿಟಿ ಬರುತ್ತೆ, ಮೈಸೂರಿನ ಮೇಯರ್ ಚುನಾವಣೆಯಲ್ಲಿ ಸೋಮಶೇಖರ್, ಅಲ್ಲಿನ ಸಂಸದರು ಸೇರಿದಂತೆ ಎಲ್ಲರೂ ಸೇರಿ ಬಿಜೆಪಿಯ ಮೊದಲ ಮೇಯರ್ ಆಯ್ಕೆ ಆಗುವಂತೆ ಮಾಡಿದ್ದಾರೆ. ದಾವಣಗೆರೆಯಿಂದಲೇ ನಮ್ಮ ವಿಜಯಯಾತ್ರೆ ಆರಂಭವಾಗಿದೆ. ಮುಂದೆ ಬಿಬಿಎಂಪಿ ಚುನಾವಣೆಯಲ್ಲಿ ಸ್ವತಂತ್ರವಾಗಿ ಮೆಜಾರಿಟಿಯಲ್ಲಿ ಬಿಜೆಪಿ ಬರುತ್ತೆ. ಬೆಂಗಳೂರಿನ ನಾಯಕರು ಇದನ್ನು ಮಾಡುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು



