ದಾವಣಗೆರೆ: ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಬೃಹತ್ ಲಸಿಕಾ ಮೇಳ ನಡೆಯಲಿದ್ದು, 1 ಲಕ್ಷ ಜನರಿಗೆ ಕೊರೊನಾ ವ್ಯಾಕ್ಸಿನ್ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿಂದು ಅಧಿಕಾರಿಗಳ ಸಭೆ ಯಲ್ಲಿ ಮಾತನಾಡಿದ ಅವರು, ನೂರು ಆರೋಗ್ಯ ಸಂಸ್ಥೆಗಳ ಮೂಲಕ ಲಸಿಕೆ ನೀಡಲಾಗುತ್ತಿದ್ದು, ಪಿ.ಹೆಚ್.ಸಿ.ಸಿ ಹೆಚ್ ಸಿ.ತಾಲ್ಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆ,ಇಎಸ್ಐ,ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ದಿನದಲ್ಲಿ 1 ಲಕ್ಷ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.
ಅಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗುವ ಲಸಿಕೆ ಮೇಳದಲ್ಲಿ ಪ್ರತಿ 2 ಗಂಟೆಗೊಮ್ಮೆ ಮಾಹಿತಿ ತೆಗೆದುಕೊಳ್ಳಲಾಗುವುದು. ಹರಿಹರ ದ 31 ವಾರ್ಡಗಳಲ್ಲಿ 31 ತಂಡಗಳು ಕಾರ್ಯ ನಿರ್ವಹಿಸಲಿದ್ದು ದಾವಣಗೆರೆ ನಗರದ 45 ವಾರ್ಡಗಳಲ್ಲಿ 45 ತಂಡಗಳು ಕಾರ್ಯ ನಿರ್ವಹಿಸಲಿವೆ.
ಜಿಲ್ಲೆಯ 195 ಗ್ರಾ.ಪಂ ಗಳ ಕೇಂದ್ರ ಸ್ಥಾನಗಳಲ್ಲಿ 1 ತಂಡ ಕನಿಷ್ಠ 200 ಜನರಿಗೆ ಲಸಿಕೆ ನೀಡಲಿದೆ,ಈ ಸಂಬಂಧ ಈಗಾಗಲೇ ಎಲ್ಲಾ ತಹಶೀಲ್ದಾರ್,ಇಓಗಳು ,ಟಿ.ಹೆಚ್. ಓ,ಸಿಡಿಪಿಓ ಗಳಿಗೆ ತರಬೇತಿ ನೀಡಲಾಗಿದೆ.ನಾಳೆ ತಾಲೂಕು ಮಟ್ಟದ ತರಬೇತಿ ನಡೆಯಲಿದ್ದು ಎಲ್ಲಾ ಬಿ.ಎಲ್.ಓ.ಗಳು ತಮ್ಮ ವ್ಯಾಪ್ತಿಯಲ್ಲಿ ಲಸಿಕೆ ಪಡೆದುಕೊಂಡಿಲ್ಲದವರ ಪಟ್ಟಿ ತಯಾರಿಸಲಿದ್ದಾರೆ. ಗ್ರಾ.ಪಂ. ಮಟ್ಟದಲ್ಲಿ ಆಟೋ ಪ್ರಚಾರ ನಗರದಲ್ಲಿ ಕಸದ ಗಾಡಿಗಳಲ್ಲಿ ಪ್ರಚಾರ ವ್ಯವಸ್ಥೆ ಮಾಡಲಾಗುವುದು ಹಾಗೂ ಹಳ್ಳಿಗಳಲ್ಲಿ ಡಂಗೂರ ಬಾರಿಸಲು ಸೂಚಿಸಲಾಗಿದೆ ಎಂದರು.
ವಿಶೇಷವಾಗಿ ದುಡಿಯುವ ಜನರಿರುವ ಪ್ರದೇಶಗಳಲ್ಲಿ ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಹಾಗೂ ಬಡ ಜನರು ವಾಸಿಸುವ ಕಡೆ ಕಾರ್ಮಿಕ ಇಲಾಖೆ ವತಿಯಿಂದ ಹೆಚ್ಚಿನ ಪ್ರಚಾರ ನಡೆಸಲಾಗುವುದೆಂದರು. ಈ ಹಿಂದೆ ವ್ಯಾಕ್ಸಿನ್ ಗೆ ವಿರೋಧ ಮಾಡಿದ್ದ ಜಾಗಗಳಲ್ಲಿ ಜನರ ಮನವೊಲಿಸಲಾಗುವು ಎಂದರು.
ತಾಲ್ಲೂಕು ಹಂತದಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಲಾಟರಿ,ಲಯನ್ಸ್,ರೆಡ್ ಕ್ರಾಸ್ ನಂತಹ ಸಂಸ್ಥೆಗಳು ಕೈ ಜೋಡಿಸಲಿವೆ. ಒಂದು ರೀತಿ ಚುನಾವಣೆ ನಡೆಸಿದ ರೀತಿಯಲ್ಲಿಯೇ ವ್ಯಾಕ್ಸಿನ್ ಮೇಳ ಯಶಸ್ವಿಗೊಳಿಸಲಾಗುವುದು ಎಂದರು. ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್,ಜಿ.ಪಂ.ಸಿಇಓ ವಿಜಯ ಮಹಾಂತೇಶ ದಾನಮ್ಮನವರ್,ಡಿ.ಹೆಚ್.ಓ ನಾಗರಾಜ್,ಆರ್ ಸಿ.ಹೆಚ್ ಅಧಿಕಾರಿ ಡಾ ಮೀನಾಕ್ಷಿ ,ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.



