ದಾವಣಗೆರೆ: ರೈತರ ಕಣ್ಮಣಿ , ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರೇ ಎಂದು ಸಚಿವ ಕೆ. ಎಸ್ . ಈಶ್ವರಪ್ಪ ಸಂಬೋಧಿಸಿದ್ರು. ಇತ್ತೀಚೆಗೆ ಸಿಎಂ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರು ಮತ್ತು ಹೈಕಮಾಂಡ್ ದೂರು ನೀಡಿದ್ದ ಈಶ್ವರಪ್ಪ, ಇವತ್ತು ಸಿಎಂ ಜೊತೆ ವೇದಿಕೆ ಹಂಚಿಕೊಂಡರು.
ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಕಾಗಿನೆಲೆ ಕನಕ ಗುರು ಪೀಠದ ಶಾಖಾ ಮಠದ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಕುರುಬ ಸಮಾಜದ ಪಾದಯಾತ್ರೆ ನಂತರ ನಮ್ಮನ್ನೆಲ್ಲಾ ಒಂದೆಡೆ ಸೇರಿಸಿದ ಕಾಗಿನೆಲೆ ಶ್ರೀಗಳಿಗೆ ಸಾಷ್ಟಾಂಗ ನಮಸ್ಕಾರಗಳು ಎಂದರು.
ಕನಕದಾಸ ಜಯಂತಿ ಆರಂಭಿಸಿದ್ದು ಬಿಜೆಪಿ ಸರ್ಕಾರ. ಅದರಲ್ಲೂ ಕನಕದಾಸ ಜಯಂತಿಗೆ ಯಡಿಯೂರಪ್ಪ ಅವಕಾಶ ಮಾಡಿದ್ದು ಎಂದೂ ಮರೆಯುವಂತಿಲ್ಲ.ಪಾದಯಾತ್ರೆ ಆರಂಭಿಸಬೇಕೆಂದಾಗ ನಮಗೆ ಭಯ ಇತ್ತು. ಆದ್ರೆ, ಪಾದಯಾತ್ರೆ ಯಶಸ್ವಿಯಾಯಿತು. ಹೀಗಾಗಿ ಇಡೀ ಸಮಾಜವನ್ನು ಪಾದಯಾತ್ರೆ ಒಂದು ಮಾಡಿತು ಎಂದು ತಿಳಿಸಿದರು.
ಎಲ್ಲಾ ಸಮಾಜಕ್ಕೂ ಮೀಸಲಾತಿ ಹೋರಾಟ ಮಾದರಿಯಾಯಿತು.ಕುರುಬ ಸಮುದಾಯ ಒಂದಕ್ಕೆ ನಾವು ಮೀಸಲಾತಿ ಕೇಳಲಿಲ್ಲ. ಇಬ್ಬರು ಸ್ವಾಮೀಜಿಗಳ ಪ್ರಯತ್ನ ಕುರುಬ ಸಮುದಾಯಕ್ಕೆ ಸೀಮಿತವಾಗಿಲ್ಲ. ಸವಿತಾ, ಉಪ್ಪಾರ , ಮಾದಾರ ಹೀಗೆ ಹಿಂದುಳಿದ ಸಮಾಜದ 35 ಸಮಾಜಗಳನ್ನು ಸೇರಿಸಿದ್ದರು. ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದಾಗ 100 ಕೋಟಿ ಅನುದಾನವನ್ನು ಹಿಂದುಳಿದ ಸಮಾಜಕ್ಕೆ ಕೇಳಿದ್ದು,ಕಾಗಿನೆಲೆ ಶ್ರೀಗಳು ಅಂದು ನೇತೃತ್ವ ವಹಿಸಿದ್ದರು.
ಮೀಸಲಾತಿ ಹಾಗು ಹೊಸದುರ್ಗದ ಕನಕದಾಸ ಪ್ರತಿಮೆ ಸ್ಥಾಪಿಸಬೇಕು ಎಂಬುದು ಸ್ವಾಮೀಜಿ ಅಭಿಮತ. ಸಿಎಂ ಮುಂದೆ ಎರಡು ಬೇಡಿಕೆ ಇಟ್ಟಿದ್ದಾರೆ ಅದಕ್ಕೆ ಸಂತೋಷವಾಯಿತು.ಅವರ ಪ್ರಯತ್ನದಲ್ಲಿ ನ್ಯಾಯ ಸಿಗಬೇಕು.ಮೀಸಲಾತಿಯನ್ನು 50 % ಗಿಂತ ಜಾಸ್ತಿ ಮಾಡಲು ಬಜೆಟ್ ನಲ್ಲಿ ಒಪ್ಪಿದ್ದೇವೆ. ಸಿಎಂ ಬಿ ಎಸ್ ವೈ ನೇತೃತ್ವದಲ್ಲಿ ಆ ತೀರ್ಮಾನ ತೆಗೆದುಕೊಂಡಿದ್ದೇವೆ. ಈ ಕಾರ್ಯದಲ್ಲು ಜಗದ್ಗುರುಗಳ ಜೊತೆಗಿರುತ್ತೇವೆ ಎಂದರು.



