ಹರಿಹರ: ಮಲೇಬೆನ್ನೂರು ಹೋಬಳಿ ವ್ಯಾಪ್ತಿಯ ಸುಕ್ಷೇತ್ರ ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿ ರಥೋತ್ಸವ ಮಾರ್ಚ್ 14ರಂದು ಬೆಳಿಗ್ಗೆ 8.30ಕ್ಕೆ ಸರಳವಾಗಿ ನಡೆಯಲಿದೆ.
ಮಾ.13ರಂದು ಬೆಳಿಗ್ಗೆ 8ಕ್ಕೆ ನಂದಿ ಧ್ವಜಾ ರೋಹಣ ಮೂಲಕ ಉತ್ಸವಕ್ಕೆ ನಂದಿಗುಡಿ ವೃಷಭಪುರಿ ಸಂಸ್ಥಾನದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿವರ್ಷ ಮಹಾಶಿವರಾತ್ರಿ ಅಂಗವಾಗಿ ಒಂದು ವಾರ ಜಾತ್ರಾ ಮಹೋತ್ಸವ ಆಯೋಜಿಸಲಾಗುತ್ತದೆ ಎಂದು ಎಂದು ಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಕಾರ್ಯದರ್ಶಿ ಎಸ್.ಸುರೇಶ್ ತಿಳಿಸಿದರು.
ಜಾತ್ರಾ ಮಹೋತ್ಸವ ಅಂಗವಾಗಿ ಬಹಿರಂಗ ಕುಸ್ತಿ, ಭಜನೆ, ಕೀರ್ತನೆ ಗಾಯನ ಸೇರಿ ಹಲವು ಕಾರ್ಯಕ್ರಮಗಳು ನಡೆಯಲಿವೆ. ಮಾ.15, 16 ಹಾಗೂ 17ರಂದು ಜವಳ, ಹರಕೆ, ತುಲಾಭಾರ, ಕಾಣಿಕೆ ಸಮರ್ಪಣೆ, ಕುಸ್ತಿ ಪಂದ್ಯಾವಳಿ ನಡೆಯಲಿದೆ. ಮಾ.18ರಂದು ಫಳಾರ ಹಾಕುವುದು, ಮಾ.19ರಂದು ಬೆಳಿಗ್ಗೆ 10ಕ್ಕೆ ಕರಿಬಸವೇಶ್ವರಸ್ವಾಮಿ ಬೆಳ್ಳಿ ರಥೋತ್ಸವ ಹಾಗೂ ಸಂಜೆ 7ಕ್ಕೆ ರಾಜಬೀದಿ ಉತ್ಸವ ನಡೆಯಲಿದೆ. ಮಾ.20ರಂದು ಫಳಾರ ಹಂಚುವ ಕಾರ್ಯಕ್ರಮ ನಡೆಯಲಿದ. ಭಕ್ತರು ಕೊರೊನಾ ನಿಯಮ ಪಾಲಿಸಿ ಉತ್ಸವಕ್ಕೆ ಸಹಕರಿಸಬೇಕು ಎಂದು ಕೋರಿದ್ದಾರೆ.



