ದಾವಣಗೆರೆ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆ ಖಂಡಿಸಿ ಇಂದು ದಾವಣಗೆರೆ ದಕ್ಷಿಣ ವಲಯ ಬ್ಲಾಕ್ ಕಾಂಗ್ರೆಸ್ನಿಂದ ಸೌದೆ ಒಲೆಯಲ್ಲಿ ಅಡುಗೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ದಕ್ಷಿಣ ವಲಯದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಯೂಬ್ ಪೈಲ್ವಾನ್ ನೇತೃತ್ವದಲ್ಲಿ ಹೊಂಡದ ವೃತ್ತದಿಂದ ಬೃಹತ್ ಪ್ರತಿಭಟನೆ ಹೊರಟ ಪ್ರತಿಭಟನಾಕಾರರು ವೀರ ಮದಕರಿನಾಯಕ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗಣೇಶ್ ರಾವ್ ವೃತ್ತದಲ್ಲಿರುವ ದರ್ಗಾಕ್ಕೆ ತೆರಳಿ ಪೂಜೆ ಸಲ್ಲಿಸಿದ
ನಂತರ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವಸ್ಥಾನ ಮುಂಭಾಗದಲ್ಲಿ ಪ್ರತಿಭಟನೆ ಆರಂಭಿಸಿದರು.
ಜನಸಮಾನ್ಯರಿಗೆ ‘ಅಚ್ಛೇದಿನ್’ ತರುತ್ತೇವೆ ಎಂದು ಹೇಳಿಕೊಂಡು ಕೇಂದ್ರಸರ್ಕಾರ ದೇಶದ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ.
ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದ್ದು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಆಕಾಶಕ್ಕೆ ಜಿಗಿದಿವೆ. ಇದು ಅಚ್ಛೇದಿನ್ ಅಲ್ಲ ‘ಭೂರೇ ದಿನ್’ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಕಿಡಿಕಾರಿದರು.
ಉಜ್ವಲ್ ಯೋಜನೆ ಅಡಿ ಮಹಿಳೆಯರಿಗೆ ಅನುಕೂಲವಾಗಲೆಂದು ಉಚಿತ ‘ಗ್ಯಾಸ್ ಒಲೆ, ಸಿಲೆಂಡರ್’ಗಳನ್ನು ಕೇಂದ್ರ ಸರ್ಕಾರ ನೀಡಿತು. ಆದರೆ, ಈಗ ಅಡುಗೆ ಅನಿಲದ ಬೆಲೆ 800 ದಾಟಿದೆ. ಒಂದು ತಿಂಗಳಲ್ಲೇ ಸತತ ಮೂರು ಬಾರಿ ದರ ಏರಿಕೆ ಮಾಡಲಾಗಿದೆ. ಹೀಗಾಗಿ, ಮಹಿಳೆಯರು ಮತ್ತೆ ಸೌದೆ ಒಲೆಯತ್ತ ಅಡುಗೆ ಮಾಡಲು ಮುಖ ಮಾಡಿದ್ದಾರೆ ಎಂದು ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರವಿದ್ದಾಗ ಪೆಟ್ರೋಲ್ ಬೆಲೆ 60 ರೂ., ದಾಟಿರಲಿಲ್ಲ. ಈಗ ಮೋದಿ ಸರ್ಕಾರದಲ್ಲಿ 100 ರೂ., ಸನಿಹಕ್ಕೆ ಪೆಟ್ರೋಲ್ ದರ ತಲುಪಿದ್ದು, ವಾಹನ ಸವಾರರಿಗೆ ನುಂಗಲಾರದ ತುತ್ತಾಗಿದೆ. ಆಗೆಲ್ಲಾ ಪ್ರಧಾನಿ ಮೋದಿ ಕೊಂಡಾಡುತ್ತಿದ್ದವರು ಈಗ ದುರಾಡಳಿತ ಕಂಡು ಮೋದಿ ತಿರುಗಿಬಿದ್ದಿದ್ದಾರೆ ಎಂದರು.
ಆಯೂಬ್ ಪೈಲ್ವಾನ್ ಮಾತನಾಡಿ, ದೇಶದ ಜನರು ಮೋದಿ ಆಡಳಿತದಲ್ಲಿ ಸಾಕಷ್ಟು ತೊಂದರೆಗೆ ಈಡಾಗಿದ್ದಾರೆ. ಆಹಾರ ವಸ್ತುಗಳ ಬೆಲೆಯೂ ಗಗನಕ್ಕೇರಿವೆ, ಇತ್ತ ಕಡೆ ಜಿಎಸ್ ಟಿ ಅಂತಹ ನೀತಿಗಳಿಂದಾಗಿ ಕೈಗಾರಿಕೆಗಳು, ಉದ್ಯಮಗಳು ಬಾಗಿಲು ಹಾಕಿರುವುದರಿಂದ ನಿರುದ್ಯೋಗ ಸೃಷ್ಟಿಯಾಗಿದೆ. ಪೆಟ್ರೋಲ್, ಡಿಸೇಲ್ ದರ ನೂರರ ಗಡಿಗೆ ತಲುಪಿದೆ ಜನರು ಜೀವನ ನಡೆಸುವುದಾದರೂ ಹೇಗೆ ಸಾಧ್ಯ ಎಂದು ಕೇಂದ್ರದ ವಿರುದ್ಧ ಗುಡುಗಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅನಿತಾಬಾಯಿ ಮಾಲತೇಶ್ ಜಾಧವ್ ಮಾತನಾಡಿ, ಅಡುಗೆ ಅನಿಲ ದರ ಏರಿಕೆ ಕೇಳಿಯೇ ಮಹಿಳೆಯರು ಕೈಸುಟ್ಟುಕೊಂಡಂತಾಗಿದೆ. ಎರಡ್ಮೂರು ತಿಂಗಳಲ್ಲಿ ಕೇಂದ್ರವು ಅಡುಗೆ ಅನಿಲ ದರವನ್ನು ದುಪ್ಪಟ್ಟು ಮಾಡಿದೆ. ಮತ್ತೆ ಹಿಂದಿನಂತೆ ಮಹಿಳೆಯರು ಸೌದೆ ಒಲೆ ಕಡೆಗೆ ಮುಖ ಮಾಡಿದ್ದಾರೆ ಎಂದು ಕಿಡಿಕಾರಿದರು.
ಪಾಲಿಕೆ ಸದಸ್ಯ ವಿನಾಯಕ ಪೈಲ್ವಾನ್,ಸುಷ್ಮಾ ಪಾಟೀಲ್, ಪಾಲಿಕೆ ಸದಸ್ಯರಾದ ಚಮನ್ಸಾಬ್, ಸೈಯದ್ ಚಾರ್ಲಿ, ಗಡಿಗುಡಾಳ್ ಮಂಜುನಾಥ್, ಇಟ್ಟಿಗುಡಿ ಮಂಜುನಾಥ್, ಅಬ್ದುಲ್ ಜಬ್ಬಾರ್, ಮುಜಾಹಿದ್, ದಾದಾಪೀರ್, ಸಾಗರ್ ಸೇರಿ ಅನೇಕರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು



