ದಾವಣಗೆರೆ: ಪರಕೀಯರ ದಾಳಿಗೆ ಒಳಗಾಗಿದ್ದರೂ ಸಹ ನಮ್ಮ ಭಾರತ ದೇಶದ ಭವ್ಯವಾದ ಸಂಸ್ಕೃತಿ ಇಂದಿಗೂ ಸುಭದ್ರವಾಗಿ ಉಳಿದಿದೆ ಎಂದರೆ ಅದು ನಮ್ಮ ಕಲೆಗಳಿಂದ ಮತ್ತು ಕಲಾವಿದರಿಂದ ಎಂದು ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾಲಕರಾದ ಲೀಲಾಜಿ ಅಕ್ಕ ತಿಳಿಸಿದರು.
ದಾವಣಗೆರೆಯ ಯಕ್ಷ ಸೌರಭ ಯಕ್ಷಗಾನ ಕಲಿಕಾ ಕೇಂದ್ರದ 3 ನೇ ವಾರ್ಷಿಕೋತ್ಸವ ಮತ್ತು ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ದಾವಣಗೆರೆ ನಗರದ ವಿನೋಬ ನಗರದ ಶ್ರೀ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಪ್ರೌಢ ಶಾಲೆಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ದೇವತಾ ಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶ ತಪಸ್ವಿಗಳು ಹಾಗೂ ಮಹಾತ್ಮರು ತಪಸ್ಸನ್ನು ಮಾಡಿದ ಪವಿತ್ರವಾದ ತಪೋ ಭೂಮಿ. ಯಕ್ಷಗಾನ ಕಲೆಯೂ ಕೂಡಾ ದೈವೀ ಆರಾಧನಾ ಕಲೆಯಾಗಿದ್ದು ನಮ್ಮ ದೇಶದ ಸಂಸ್ಕೃತಿಯ ಹಿರಿಮೆ, ಗರಿಮೆಯನ್ನು ಹೆಚ್ಚಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ. ಇಂತಹ ಶ್ರೇಷ್ಠವಾದ ಕಲೆಯನ್ನು ದಾವಣಗೆರೆಯಲ್ಲಿ ಬೆಳೆಸುತ್ತಿರುವ ಯಕ್ಷಸೌರಭ ಯಕ್ಷಗಾನ ತರಬೇತಿ ಕೇಂದ್ರ ಪುಣ್ಯದ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಿವಾಸ ದಾಸಕರಿಯಪ್ಪ ಮಾತನಾಡಿ, ರಾಮಾಯಣ, ಮಹಾಭಾರತದಂತಹ ಶ್ರೇಷ್ಠ ಧರ್ಮ ಗ್ರಂಥಗಳ ಸಾರವನ್ನು ಯುವಪೀಳಿಗೆಗೆ ತಲುಪಿಸುವ ಕೆಲಸವನ್ನು ಯಕ್ಷಗಾನ ಕಲೆ ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪೋಲಿಸ್ ಅಧಿಕಾ ಯು.ನಾಗೇಶ ಐತಾಳ್ ಅವರು ಮಾತನಾಡಿ ಯಕ್ಷಗಾನವು ಇಂದು ವಿಶ್ವಗಾನವಾಗಿ ಖ್ಯಾತಿಗೊಂಡಿದೆ. ಡಾ. ಶಿವರಾಮ ಕಾರಂತ, ಗುಂಡ್ಮಿ ಕಾಳಿಂಗ ನಾವುಡರು, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆರೆಮನೆ ಶಂಭು ಹೆಗಡೆ ಮುಂತಾದವರ ಯಕ್ಷ ಸೇವೆಯಿಂದ ಯಕ್ಷಗಾನ ಕಲೆಯ ಅತ್ಯಂತ ಎತ್ತರಕ್ಕೆ ಬೆಳೆದಿದೆ ಹಾಗೂ ವಿಶ್ವದಾದ್ಯಂತ ಪ್ರಖ್ಯಾತಿಗೊಂಡಿದೆ ಎಂದರು.

ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಅವರು ಮಾತನಾಡಿ ದಾವಣಗೆರೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಯುವಜನತೆಗೆ ಯಕ್ಷಗಾನವನ್ನು ಕಲಿಸುತ್ತಿರುವ ಯಕ್ಷ ಸೌರಭ ಯಕ್ಷಗಾನ ಕಲಿಕಾ ಕೇಂದ್ರವು ನಮ್ಮ ದೇಶದ ಅತ್ಯಂತ ಪುರಾತನವಾದ ಕಲೆಯನ್ನು ಕಲಿಸುವ ಪುಣ್ಯದ ಕೆಲಸವನ್ನು ಮಾಡುತ್ತಿದೆ. ಕಲಿಕೆ ಎನ್ನುವುದು ನಿರಂತರವಾದ ಪ್ರಕ್ರಿಯೆ. ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಕಲಿಕಾ ಗುರುಗಳಿಗೂ ಇದು ಕಲಿಕಾ ಕೇಂದ್ರವಾಗಿದೆ. ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಹೆಚ್ಚು ಹೆಚ್ಚು ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತು ಸಹಕಾರವನ್ನು ನೀಡಲಿದೆ ಎಂದರು.
ಮುಖ್ಯ ಅತಿಥಿಗಳಾದ ಉದ್ಯಮಿ ಹಾಗೂ ಕಲಾ ಪೋಷಕರಾದ ವಾಸುದೇವ ರಾಯ್ಕರ್ ಅವರು ಮಾತನಾಡಿ ಉಡುಪಿಯ ಜನರು ಹೇಗೆ ವಿಶ್ವದ ಎಲ್ಲಾ ಭಾಗಗಳಲ್ಲಿ ಕಾಣ ಸಿಗುತ್ತಾರೆಯೇ ಹಾಗೆಯೇ ಯಕ್ಷಗಾನ ಕಲೆಯೂ ಈಗ ಜಗತ್ತಿನಾದ್ಯಂತ ಪಸರಿಸುತ್ತಿದೆ. ಈ ಪಾರಂಪರಿಕ ಕಲೆಯು ನಮ್ಮ ದೇಶದ ಹೆಮ್ಮೆಯ ಕಲೆಯಾಗಿದೆ. ಮನೋರಂಜನೆಯನ್ನು ನೀಡುವುದರ ಜೊತೆಗೆ ನಮ್ಮ ನಾಡಿನ ಸಾಂಸ್ಕೃತಿಕ, ಪೌರಾಣಿಕ ನೆಲೆಗಟ್ಟನ್ನು ಭದ್ರಗೊಳಿಸುತ್ತಿದೆ. ತುಂಬಾ ವೆಚ್ಚದಾಯಕವಾದ ಈ ಕಲೆಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ ಎಂದರು.
ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಕೆ.ಬಕ್ಕಪ್ಪ ಅವರು ಮಾತನಾಡಿ ಯಕ್ಷಗಾನ ಕಲೆಯು ನಾಟ್ಯ, ಸಂಗೀತ, ಮಾತುಗಾರಿಕೆ ಹಾಗೂ ವೇಷ-ಭೂಷಣಗಳನ್ನೊಳಗೊಂಡ ಒಂದು ಪರಿಪೂರ್ಣವಾದ ಶಾಸ್ತ್ರೀಯ ಕಲೆಯಾಗಿದೆ ಎಂದರು.ಯಕ್ಷ ಸೌರಭ ಸಂಸ್ಥೆಯ ಅಧ್ಯಕ್ಷರಾದ ಸಕ್ಕಟ್ಟು ರಾಜಶೇಖರ್ ಅವರು ಸದೃಢ, ಸ್ವಾಸ್ಥ್ಯ ಮತ್ತು ಪ್ರಜ್ಞಾವಂತರನ್ನು ಸೃಷ್ಟಿಸುವ ಮನೋಜ್ಞವಾದ ಯಕ್ಷಗಾನ ಕಲೆಯ ಮಹತ್ವ ಮತ್ತು ಅದನ್ನು ಯುವಜನತೆಗೆ ಕಲಿಸುವ ಅಗತ್ಯತೆಯ ಬಗ್ಗೆ ತಿಳಿಸಿದರು.
ಯಕ್ಷ ಸೌರಭ ಯಕ್ಷಗಾನ ಕಲಿಕಾ ಕೇಂದ್ರದ ಸಂಸ್ಥಾಪಕರು ಮತ್ತು ಯಕ್ಷ ಗುರುಗಳಾದ ಕರ್ಜೆ ಸೀತಾರಾಮ ಆಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿ , ಅರಿವಂ ಪಸರಿಸುವುದೇ ಧರ್ಮಂ, ಅದಂ ಕೆಡಿಪುದೇ ಅಧರ್ಮಂ’ ಎನ್ನುವ ಪಂಪನ ಉಕ್ತಿ ಉಲ್ಲೇಖಿಸಿ ನಮ್ಮಲ್ಲಿರುವ ಕಲೆಯ ಜ್ಞಾನವು ನಿಂತ ನೀರಾಗಬಾರದು. ಅದು ಸದಾ ಹರಿಯುವ ನೀರಾಗಬೇಕು. ವ್ಯಾವಹಾರಿಕ ಅಥವಾ ಲಾಭದಾಯಕ ದೃಷ್ಠಿಕೋನವಿಲ್ಲದೇ ಕೇವಲ ಸೇವಾ ಮನೋಭಾವನೆಯಿಂದ ಈ ಯಕ್ಷಗಾನ ಕಲಿಕಾ ಕೇಂದ್ರವನ್ನು ಆರಂಭಿಸಲಾಗಿದೆ. ಕೇವಲ ನಿರ್ವಹಣಾ ವೆಚ್ಚವನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆದು ಈ ಸಂಸ್ಥೆಯನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಕೆನರಾ ಬ್ಯಾಂಕ್ ಉದ್ಯೋಗಿ ಹಾಗೂ ಯಕ್ಷಗಾನ ಕೆ.ರಾಘವೇಂದ್ರ ನಾಯರಿ ಉಪಸ್ಥಿತರಿದ್ದರು ಹಾಗೂ ಯಕ್ಷ ಸೌರಭದ ಪದಾಧಿಕಾರಿಗಳಾದ ರಾಘವೇಂದ್ರ ಪಿ.ಶೇಟ್, ಅನಿತಾ ಡಿ.ಭಾಸ್ಕರ್, ಮಾಲತೇಶ್ ನಾಡಿಗೇರ್, ಲತಾ ವಾದಿರಾಜ್, ಸೌಮ್ಯಾ ಸತೀಷ್, ಅಮೂಲ್ಯ ಸಿ, ವಿದ್ಯಾಲತಾ, ಲತಾ ರವಿ ಕಬ್ಬನೂರು, ಶ್ರೀನಿವಾಸ ಉಪಾಧ್ಯ, ಉದಯ್ ಸೇರಿಗಾರ್, ರಾಗಿಣಿ ನಾಡಿಗೇರ್, ಗಂಗಾ, ಸಿಂಧು, ಇಂಪನ, ಚಿತ್ರಾ ಮುಂತಾದವರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಯಕ್ಷ ಸೌರಭ ಸಂಸ್ಥೆಯ ಸಂಸ್ಥಾಪಕರಾದ ಯಕ್ಷ ಗುರು ಕರ್ಜೆ ಸೀತಾರಾಮ ಆಚಾರ್ಯರಿಗೆ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಗಣ್ಯರಿಂದ ಗೌರವ ಸಮರ್ಪಣೆ ಸಲ್ಲಿಸಲಾಯಿತು.