ಚಿತ್ರದುರ್ಗ: ಬಾದಾಮಿ ಕ್ಷೇತ್ರದಲ್ಲಿ ನನ್ನನ್ನು ಮತದಾರರು ಸೋಲಿಸಲಿಲ್ಲ. ಬಿಜೆಪಿ ನಾಯಕರೇ ಸೋಲಿಸಿದರು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಬಿ. ಶ್ರೀರಾಮುಲು ಬೇಸರ ವ್ಯಕ್ತಪಡಿಸಿದರು.
ನೂತನ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾಡಿದರು. ಶ್ರೀರಾಮುಲು ವಾಲ್ಮೀಕಿ ನಾಯಕ ಸಮಾಜದ ನಾಯಕ. ಈ ಸಣ್ಣ ಕುಲದವನು ಗೆದ್ದರೆ ನಮಗೆ ಮುಳ್ಳಾಗ್ತಾನೆಂದು ಸೋಲಿಸಿದರು. ಮೋದಿ, ಅಮಿತ್ ಶಾ ಅಂತಹವರು ಮಾತ್ರ 2 ಕಡೆ ಸ್ಪರ್ಧಿಸ್ತಾರೆ. ನಮ್ಮ ವರಿಷ್ಠರು ನನಗೂ 2 ಕಡೆ ಸ್ಪರ್ಧೆಗೆ ಅವಕಾಶ ನೀಡಿದ್ದರು. ಆದರೆ ನನ್ನನ್ನು ಬಿಜೆಪಿ ನಾಯಕರೇ ಸೋಲಿಸಿದರು ಎಂದರು.
ಬಾದಾಮಿಯಲ್ಲಿ ಸೋತ ವೇಳೆ ಮೊಳಕಾಲ್ಮೂರು ಜನ ಕೈಹಿಡಿದರು. ನಾನು ಜೀವ ಬಿಡುತ್ತೇನೆ ಹೊರತು, ನಿಮ್ಮ ವಿಶ್ವಾಸ ಕಳೆದುಕೊಳ್ಳಲ್ಲ.ಬಾದಾಮಿಯಲ್ಲಿ ಏನಾಯ್ತೆಂದು ಎಲ್ಲರಿಗೂ ಗೊತ್ತು. ಎಲ್ಲರೂ ಕುಳಿತು ಮಾತಾಡಿದ್ರೆ ರಾಮುಲು ಗೆಲ್ಲಬಹುದಾಗಿತ್ತು. ಎಲ್ಲೋ ಒಂದು ಕಡೆ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಈ ಕುರಿತು ನಾನು ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ಈ ಬಗ್ಗೆ ಭಯ ಹಾಗೂ ಹೆದರಿಕೆ ಎಂಬುವುದಿಲ್ಲ. ರಾಜಕಾರಣದಲ್ಲಿ ಈವರೆಗೂ ಹೆದರಿಲ್ಲ, ಮುಂದೆ ಹೆದರಲ್ಲ ಎಂದರು.



