ಡಿವಿಜಿಸುದ್ದಿ.ಕಾಂ, ದಾವಣಗೆರೆ: ಅಪೌಷ್ಟಿಕತೆ ಮತ್ತು ಹಸಿವು ನಿವಾರಣೆಗೆ ಸತ್ವಯುತ, ಪೌಷ್ಟಿಕಾಂಶ ಒಳಗೊಂಡ ಪಾರಂಪರಿಕ ಆಹಾರ ಪದ್ಧತಿಯೊಂದೇ ಶಾಶ್ವತ ಪರಿಹಾರ ಎಂದು ಮೈಸೂರಿನ ಹಿರಿಯ ಪ್ರಧಾನ ವಿಜ್ಞಾನಿ ಡಾ. ಅನು ಅಪ್ಪಯ್ಯ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯದ ಆಹಾರ ತಂತ್ರಜ್ಞಾನ ವಿಭಾಗಆಯೋಜಿಸಿದ್ದ ವಿಶ್ವ ಆಹಾರ ದಿನಾಚರಣೆ ಮತ್ತು ಆಹಾರ ತಂತ್ರಜ್ಞಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಸಿವು ಮತ್ತು ಅಪೌಷ್ಟಿಕತೆಯು ದೇಶವನ್ನು ತೀವ್ರವಾಗಿ ಕಾಡುತ್ತಿರುವ ಸಮಸ್ಯೆಗಳಾಗಿವೆ. ಆದರೆ ಸ್ಥಳೀಯ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳದಿರುವುದೇ ಈ ಎಲ್ಲ ಸಮಸ್ಯೆಗೆ ಕಾರಣ ಎಂದು ಹೇಳಿದರು.
ನಮ್ಮ ಪಾರಂಪರಿಕ ಆಹಾರ ಪದ್ಧತಿಯು ಆರೋಗ್ಯ ವಿಜ್ಞಾನದ ಮೂಲ ತತ್ವವಾಗಿದೆ. ಈ ಆಹಾರ ಪದ್ಧತಿಯಲ್ಲಿ ಸ್ಥಳೀಯವಾಗಿ ಲಭ್ಯವಿರುವ ಸೊಪ್ಪು, ತರಕಾರಿ, ಕಾಳು ಹಾಗೂ ಇತರೆ ಬೆಳೆಗಳಲ್ಲಿರುವ ಪೌಷ್ಠಿಕಾಂಶಗಳು ಮೌಲ್ಯವರ್ಧನೆಗೆ ಸಹಕಾರಿ ಆಗಿದ್ದವು. ಅವುಗಳನ್ನು ಬಳಸುತ್ತಿದ್ದ ಗ್ರಾಮೀಣ ಭಾಗದ ಜನರು ಆರೋಗ್ಯ ಪೂರ್ಣ ಜೀವನ ನಡೆಸುತ್ತಿದ್ದರು. ಆದರೆ ಆಧುನಿಕತೆ ಪ್ರಭಾವ, ಪಾಶ್ಚಿಮಾತ್ಯ ಸಂಸ್ಕøತಿಯ ಅನುಕರಣೆಯಿಂದ ಫಾಸ್ಟ್ ಫುಡ್ ವ್ಯಾಮೋಹ ಹೆಚ್ಚಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಡಿಮೆ ಖರ್ಚಿನಲ್ಲಿ ಹೆಚ್ಚು ಪೋಷಕಾಂಶ ಒದಗಿಸುವ ಆಹಾರವನ್ನು ಸಂಶೋಧಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುವ ವಿಜ್ಞಾನಿಗಳು ಆಧುನಿಕ ತಂತ್ರಜ್ಞಾನಗಳ ನೆರವಿನೊಂದಿಗೆ ಪೌಷ್ಟಿಕ ಆಹಾರ ಮತ್ತು ಪೋಷಕಾಂಶಗಳ ಸಂಶೋಧನೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ದಾವಣಗೆರೆ ವಿವಿ ಕುಲಸಚಿವ ಪ್ರೊ. ಬಸವರಾಜ ಬಣಕಾರ ಮಾತನಾಡಿ, ಆಹಾರ ಪ್ರತಿಯೊಬ್ಬರ ಹಕ್ಕು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಹಸಿವಿನಿಂದ ಬಳಲುವ ಪರಿಸ್ಥಿತಿ ಇರಬಾರದು. ಇದು ಆ ದೇಶದ ದಾರಿದ್ರ್ಯವನ್ನು ತೋರುತ್ತದೆ. ಆ ಕಾರಣಕ್ಕಾಗಿಯೇ ಎಲ್ಲ ದೇಶಗಳು ಆಹಾರ ಸಂರಕ್ಷಣೆ, ಪೂರೈಕೆಗೆ ಆದ್ಯತೆ ನೀಡುತ್ತಿವೆ ಎಂದು ತಿಳಿಸಿದರು.
ಬೆಂಗಳೂರಿನ ಗಾರ್ಡನ್ ಸಿಟಿ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ.ಎಚ್.ಆರ್.ಭಾರ್ಗವ್, ಪ್ರೊ.ಶಿಶುಪಾಲ, ಸಿಂಡಿಕೇಟ್ ಸದಸ್ಯ ಜಯಪ್ರಕಾಶ್ ಕೊಂಡಜ್ಜಿ ಉಪಸ್ಥಿತರಿದ್ದರು.